Kannada

Fact Check: 2024 ಲೋಕಸಭಾ ಚುನಾವಣೆ ಬಳಿಕ ಮೌಲಾನಾ ಮದನಿ ಹಿಂದೂಗಳನ್ನು ಭಾರತ ತೊರೆಯುವಂತೆ ಹೇಳಿಲ್ಲ

Southcheck Network

ಮಾಜಿ ರಾಜ್ಯಸಭಾ ಸದಸ್ಯ ಮತ್ತು ಜಮೀಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಅಸಾದ್ ಮದನಿ ಅವರ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, “ಈ ದೇಶ ನಮ್ಮದು, ದೇಶದ ಬಗ್ಗೆ ನಾವು ಜವಾಬ್ದಾರರಾಗಿರಬೇಕು. ನಮ್ಮ ಧರ್ಮ, ಉಡುಗೆ, ತೊಡುಗೆ, ಆಹಾರ ಪದ್ಧತಿ ಬೇರೆ ಬೇರೆ. ನಮ್ಮ ಧರ್ಮವನ್ನು ಸಹಿಸಲಾಗದಿದ್ದರೆ, ನೀವು ಬೇರೆಡೆಗೆ ಹೋಗಬೇಕು,'' ಎಂದು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 240 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸುವಲ್ಲಿ ವಿಫಲವಾಯಿತು. ಈ ಸಂದರ್ಭ ಮದನಿ ಹಿಂದೂಗಳಿಗೆ ಭಾರತವನ್ನು ತೊರೆಯುವಂತೆ ಹೇಳಿದ್ದಾರೆ ಎಂಬ ಪೋಸ್ಟ್‌ಗಳು, ವಿಡಿಯೋಗಳು ಇತ್ತೀಚಿನವು ಎಂದು ಎಲ್ಲೆಡೆ ಹರಿದಾಡುತ್ತಿದೆ.

ಮಲ್ಲಿಕಾರ್ಜುನ ಎಂಬ ಎಕ್ಸ್ ಬಳಕೆದಾರರು, "ನಮ್ಮ ಧರ್ಮವನ್ನು ಸಹಿಸದಿದ್ದರೆ, ಹಿಂದೂಗಳು ಭಾರತವನ್ನು ತೊರೆಯಬೇಕು!. ಈ ವ್ಯಕ್ತಿಯ ಮಾತುಗಳನ್ನು ಸಾಮಾನ್ಯ ವ್ಯಕ್ತಿಯ ಮಾತು ಎಂದು ನಿರ್ಲಕ್ಷಿಸಲಾಗುವುದಿಲ್ಲ," ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹಾಗೆಯೆ ಬಾಬಾ ಬನಾರಸ್ ಎಂಬ ಎಕ್ಸ್ ಖಾತೆಯಿಂದ ಇದೇ ವಿಡಿಯೋ ಅಪ್ಲೋಡ್ ಆಗಿದ್ದು, ''ಬಿಜೆಪಿ ಬಹುಮತದಿಂದ 32 ಸ್ಥಾನಗಳನ್ನು ಕಳೆದುಕೊಂಡಿತು. ಈಗ ಅವರು ಹಿಂದೂಗಳಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ಹಿಂದೂಗಳನ್ನು ಭಾರತವನ್ನು ತೊರೆಯುವಂತೆ ಹೇಳಿದ್ದಾರೆ. ಪಿಎಫ್ಐ ಘಜ್ವಾ-ಎ-ಹಿಂದ್-20247 ರ ಟಾರ್ಗೆಟ್ಗೆ ಸರಿಯಾದ ದಿಕ್ಕಿನಲ್ಲಿದ್ದಾರೆ ಎಂದು ಅವರು ಭಾವಿಸುತ್ತಾರೆ. ಹೇ ಹಿಂದೂಗಳೇ ನಿಮಗಾಗಿ ಹೊಸ ಸ್ಥಳವನ್ನು ಕಂಡುಕೊಳ್ಳಿ ಅಥವಾ ಮತಾಂತರ ಆಗಿ,'' ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ವೈರಲ್ ವಿಡಿಯೋದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಈ ವಿಡಿಯೋ 2022 ರದ್ದಾಗಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಜನರನ್ನು ದಾರಿತಪ್ಪಿಸುತ್ತಿದೆ.

ವೈರಲ್ ವಿಡಿಯೋದಲ್ಲಿ ಟಿವಿ9 ಉತ್ತರ ಪ್ರದೇಶ ಉತ್ತರ ಖಂಡದ ಲೋಗೋ ಇದೆ. ನಾವು ನಿಜಾಂಶವನ್ನು ತಿಳಿಯಲು ಟಿವಿ9 ಉತ್ತರ ಪ್ರದೇಶ ಉತ್ತರಾಖಂಡದ ಯೂಟ್ಯೂಬ್ ಚಾನೆಲ್‌ನಲ್ಲಿ ನಿರ್ದಿಷ್ಟ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಆಗ ಮೇ 31, 2022 ರಂದು ಅಪ್ಲೋಡ್ ಮಾಡಲಾದ ವಿಡಿಯೋ ಕಂಡುಬಂದಿದೆ.

ಮೇ 29, 2022 ರಂದು ಮಿಲ್ಲತ್ ಟೈಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಕಟವಾದ ವಿಡಿಯೋ ಕೂಡ ನಮಗೆ ಸಿಕ್ಕಿತು. ಇದರಲ್ಲಿ ಸಂಪೂರ್ಣ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮದನಿ ಜಮಿಯತ್ ಉಲಮಾ-ಇ-ಹಿಂದ್‌ನ ರಾಷ್ಟ್ರೀಯ ಆಡಳಿತ ಮಂಡಳಿಯಲ್ಲಿ ಮಾತನಾಡುವುದನ್ನು ನಾವು ಕಾಣಬಹುದು. ಸದ್ಯ ವೈರಲ್ ಆಗುತ್ತಿರುವ ಕ್ಲಿಪ್ ಈ ವಿಡಿಯೋದಲ್ಲಿ 2:16 ನಿಮಿಷಗಳಿಂದ ಕಾಣಿಸಿಕೊಳ್ಳುತ್ತದೆ.

ನಾನು ಬೆದರಿಕೆ ಹಾಕುತ್ತಿಲ್ಲ. ಆದರೆ, ಈ ದೇಶವೂ ನಮ್ಮದೇ ಎಂದು ಮದನಿ ವಿಡಿಯೋದಲ್ಲಿ ಹೇಳಿದ್ದಾರೆ. ಅಂದು ನಮಗೆ ಅವಕಾಶವಿತ್ತು, ಆದರೆ ನಾವು ಪಾಕಿಸ್ತಾನಕ್ಕೆ ಹೋಗಲಿಲ್ಲ. ನಾವು ಈ ದೇಶದ ಪ್ರಜೆಗಳು, ವಿದೇಶಿಯರಲ್ಲ. ನಮ್ಮನ್ನು ಇಷ್ಟಪಡದವರು ಈ ದೇಶ ಬಿಟ್ಟು ಹೋಗಲಿ ಎಂದು ವಿಡಿಯೋದ ಕೊನೆಯಲ್ಲಿ ಹೇಳಿದ್ದಾರೆ.

ಮೇ 2022 ರಲ್ಲಿ ಜಾಗರನ್ ಮತ್ತು ಹಿಂದೂಸ್ತಾನ್ ಕೂಡ ಮದನಿಯ ಹೇಳಿಕೆಯನ್ನು ವರದಿ ಮಾಡಿರುವುದು ನಾವು ಕಂಡುಕೊಂಡಿದ್ದೇವೆ.

ಈ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದ ಕಾರಣ ಹಿಂದೂಗಳನ್ನು ಭಾರತ ತೊರೆಯುವಂತೆ ಅವರು ಹೇಳಲಿಲ್ಲ. ಮೌಲಾನಾ ಮಹಮೂದ್ ಅಸಾದ್ ಮದನಿ ವೈರಲ್ ವಿಡಿಯೋ 2022 ರದ್ದು ಎಂದು ನಾವು ಖಚಿತಪಡಿಸುತ್ತೇವೆ.

Fact Check: Fake letter claims Adani Group threatens to expose corrupt officials in Kenya

Fact Check: ക്രിസ്ത്യന്‍ സെമിനാരിയില്‍ ഇസ്ലാം മതപഠനമോ? പ്രചാരണത്തിന്റെ വാസ്തവമറിയാം

Fact Check: மலேசியாவில் சிகிச்சை பெற்று வரும் பாலஸ்தீனியர்களை அந்நாட்டுப் பிரதமர் நேரில் சென்று சந்தித்தாரா?

ఫ్యాక్ట్ చెక్: ఐకానిక్ ఫోటోను ఎమర్జెన్సీ తర్వాత ఇందిరా గాంధీకి సీతారాం ఏచూరి క్షమాపణలు చెబుతున్నట్లుగా తప్పుగా షేర్ చేశారు.

Fact Check: ಬೆಂಗಳೂರಿನಲ್ಲಿ ಜಿಹಾದಿಗಳಿಂದ ಇಬ್ಬರು ಹಿಂದೂ ಹುಡುಗಿಯರ ಅಪಹರಣ ಎಂದು ಈಜಿಪ್ಟ್​​ನ ವೀಡಿಯೊ ವೈರಲ್