Top Stories

Fact Check: ಬಲೂಚಿಸ್ತಾನದ ಜನರು ಭಾರತದ ಧ್ವಜ ಹಾರಿಸಿ ಸಂಭ್ರಮಿಸಿದ್ದಾರೆಯೇ? ಇಲ್ಲ, ಇದು ಸೂರತ್​ನ ವೀಡಿಯೊ

ವೀಡಿಯೊದಲ್ಲಿ ದೊಡ್ಡ ಜನಸಮೂಹ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದನ್ನು ಕಾಣಬಹುದು. ಅವರು ಭಾರತೀಯ ಧ್ವಜವನ್ನು ಹಿಡಿದುಕೊಂಡು, ವಾದ್ಯಗಳ ಜೊತೆಗೆ 'ಸಾರೆ ಜಹಾನ್ ಸೇ ಅಚ್ಚಾ' ಹಾಡನ್ನು ನುಡಿಸುತ್ತಿರುವುದನ್ನು ಕಾಣಬಹುದು.

Vinay Bhat

ಆಪರೇಷನ್ ಸಿಂಧೂರ್ ನಂತರ ಬಲೂಚಿಸ್ತಾನ್ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿಕೊಂಡಾಗ ಅಲ್ಲಿನ ಜನರು ಭಾರತದ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆ ಹಾಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ದೊಡ್ಡ ಜನಸಮೂಹ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದನ್ನು ಕಾಣಬಹುದು. ಅವರು ಭಾರತೀಯ ಧ್ವಜವನ್ನು ಹಿಡಿದುಕೊಂಡು, ವಾದ್ಯಗಳ ಜೊತೆಗೆ 'ಸಾರೆ ಜಹಾನ್ ಸೇ ಅಚ್ಚಾ' ಹಾಡನ್ನು ನುಡಿಸುತ್ತಿರುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇವರು ನಮ್ಮ ದೇಶದವರೇನು? ಹಾಗೆ ತಿಳಿದರೆ ನೀವು ಮೂರ್ಖರು, ಇದು ನಡೆಯುತ್ತಿರುವುದು ಬಲೂಚಿಸ್ತಾನದಲ್ಲಿ. ಇತ್ತ ನಮ್ಮ ದೇಶದಲ್ಲಿ ಭಾರತೀಯರಾಗಿದ್ದು, ರಾಷ್ಟ್ರ ಭಕ್ತಿ, ರಾಷ್ಟ್ರ ಧರ್ಮ ಮರೆತು ನಮ್ಮ ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಅವಮಾನಿಸುವ ಕಚಡಗಳಿರುವಾಗ, ಅತ್ತ ಬಲೂಚಿಸ್ತಾನದಲ್ಲಿ ನಮ್ಮ ರಾಷ್ಟ್ರ ಧ್ವಜ ಹಿಡಿದು, ನಮ್ಮ ದೇಶ ಭಕ್ತಿಗೀತೆಯನ್ನು ಮೊಳಗಿಸುತ್ತಾ ಬಲೂಚಿಗಳು ಸಾಗುವಾಗ ಮೇರಾ_ದೇಶ್_ಮಹಾನ್ ಎನ್ನಲು ಎಷ್ಟು ಹೆಮ್ಮೆ ಆಗುತ್ತದೆ ಅಲ್ಲವೇ?’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಹೇಳಿಕೆ ಸುಳ್ಳು ಎಂದು ಸೌತ್ ಚೆಕ್ ಕಂಡುಕೊಂಡಿದೆ. ಈ ವೀಡಿಯೊ ಗುಜರಾತ್‌ನ ಸೂರತ್‌ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಯೋಜಿಸಿದ್ದ ತಿರಂಗ ಯಾತ್ರೆಯನ್ನು ತೋರಿಸುತ್ತದೆ. ಈ ವೀಡಿಯೊ ಬಲೂಚಿಸ್ತಾನದದ್ದಲ್ಲ.

ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಬಲೂಚಿಸ್ತಾನದ ಕರೆಗೆ ಸಂಬಂಧಿಸಿದಂತೆ, ಮೇ 9 ರಂದು ಇಂಡಿಯಾ ಟುಡೇಯಲ್ಲಿ, ‘ಬಲೂಚ್ ಬರಹಗಾರರು ಪಾಕ್‌ನಿಂದ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಾರೆ, ವಿಶ್ವಸಂಸ್ಥೆಯ ಮಾನ್ಯತೆಗಾಗಿ ಒತ್ತಾಯಿಸುತ್ತಾರೆ' ಎಂಬ ಶೀರ್ಷಿಕೆಯ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಲೇಖನದ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಖ್ಯಾತ ಬಲೂಚ್ ಬರಹಗಾರ ಮಿರ್ ಯಾರ್ ಬಲೂಚ್, ಬಲೂಚಿಸ್ತಾನ್ ಪಾಕಿಸ್ತಾನದಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡಿದ್ದಾರೆ. ನವದೆಹಲಿಯಲ್ಲಿ ಬಲೂಚ್ ರಾಯಭಾರ ಕಚೇರಿಯನ್ನು ತೆರೆಯಲು ಅವರು ಭಾರತ ಸರ್ಕಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

"ಬಲೂಚ್ ಜನರ ಪರವಾಗಿ ವಕಾಲತ್ತು ವಹಿಸುವವರಿಗೆ ಹೆಸರುವಾಸಿಯಾದ ಮಿರ್ ಯಾರ್ ಬಲೂಚ್, ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಸರಣಿ ಪೋಸ್ಟ್‌ಗಳಲ್ಲಿ ಘೋಷಣೆ ಮಾಡಿದ್ದಾರೆ. ಬಲೂಚಿಸ್ತಾನಕ್ಕೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ಅವರು ವಿಶ್ವಸಂಸ್ಥೆಯನ್ನು ಒತ್ತಾಯಿಸಿದರು ಮತ್ತು ಪಾಕಿಸ್ತಾನಿ ಸೈನ್ಯವು ಈ ಪ್ರದೇಶವನ್ನು ತೊರೆಯಬೇಕೆಂದು ಒತ್ತಾಯಿಸಿದರು" ಎಂದು ವರದಿ ಸೇರಿಸಲಾಗಿದೆ.

ಆದಾಗ್ಯೂ, ಬಲೂಚಿಸ್ತಾನದ ಜನರು ‘ಸಾರೆ ಜಹಾನ್ ಸೇ ಅಚ್ಚಾ' ಹಾಡುತ್ತಾ ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ರ್ಯಾಲಿಗಳನ್ನು ಆಯೋಜಿಸಿದ್ದಾರೆ ಎಂಬ ಯಾವುದೇ ಇತ್ತೀಚಿನ ವರದಿಗಳು ನಮಗೆ ಕಂಡುಬಂದಿಲ್ಲ.

ಬಳಿಕ ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ವೀಡಿಯೊದಲ್ಲಿ, ಬ್ಯಾಂಡ್ ಸದಸ್ಯರು ಹೊತ್ತೊಯ್ಯುವ ಸಂಗೀತ ವಾದ್ಯಗಳ ಮೇಲೆ ‘ಸೈಫೀ ಸ್ಕೌಟ್ಸ್ ಸೂರತ್' ಎಂದು ಬರೆಯಲಾಗಿದೆ. ಬ್ಯಾಂಡ್ ಸದಸ್ಯರು ಬಿಳಿ ಶರ್ಟ್, ಖಾಕಿ ಪ್ಯಾಂಟ್ ಒಳಗೊಂಡ ಸಮವಸ್ತ್ರವನ್ನು ಧರಿಸಿದ್ದರು ಮತ್ತು ಶರ್ಟ್ ಮೇಲೆ ಹಸಿರು ಲಾಂಛನವನ್ನು ಕಾಣಬಹುದು.

ಈ ಮಾಹಿತಿಯ ಆಧಾರದ ಮೇಳೆ ಕೀವರ್ಡ್ ಹುಡುಕಾಟ ನಡೆಸಿದಾಗ, ‘ಸೈಫೀ ಸ್ಕೌಟ್ಸ್ ಸೂರತ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊದಲ್ಲಿಯೂ ಸಹ, ಬ್ಯಾಂಡ್ ಸದಸ್ಯರು ಹಸಿರು ಚಿಹ್ನೆಯೊಂದಿಗೆ ವೈರಲ್ ವೀಡಿಯೊದಲ್ಲಿರುವ ಸಮವಸ್ತ್ರವನ್ನು ಧರಿಸಿರುವುದನ್ನು ಕಾಣಬಹುದು. ವೀಡಿಯೊವನ್ನು ಮೇ 15 ರಂದು ಅಪ್‌ಲೋಡ್ ಮಾಡಲಾಗಿದ್ದು, "ತಿರಂಗ ಯಾತ್ರಾ ಸೂರತ್ 2025 @saifeescoutsurat ನಿಂದ ಬ್ಯಾಂಡ್ ಪ್ರದರ್ಶನ" ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್ ಆದ ಈ ವೀಡಿಯೊದಲ್ಲಿ ಹಲವಾರು ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವಿರುವ ಬ್ಯಾನರ್ ಕೂಡ ಇದೆ. ಅದರಲ್ಲಿ ಇಂಗ್ಲಿಷ್‌ನಲ್ಲಿ ‘ಆಪರೇಷನ್ ಸಿಂಧೂರ್' ಮತ್ತು ಗುಜರಾತಿಯಲ್ಲಿ ‘ತಿರಂಗ ಯಾತ್ರಾ' ಎಂದು ಬರೆಯಲಾಗಿದೆ.

ಗುಜರಾತ್ ಫಸ್ಟ್ ಮೇ 14 ರಂದು ‘ತಿರಂಗ ಯಾತ್ರೆ: ಗಾಂಧಿನಗರ, ಸೂರತ್ ಮತ್ತು ರಾಜ್‌ಕೋಟ್‌ನಲ್ಲಿ ಭಾರಿ ಜನಸಂದಣಿಯೊಂದಿಗೆ ತಿರಂಗ ಯಾತ್ರೆ ಆಚರಿಸಲಾಯಿತು' ಎಂಬ ಶೀರ್ಷಿಕೆಯೊಂದಿಗೆ ಸುದ್ದಿಯನ್ನು ಪ್ರಕಟಿಸಿತು. ಆಪರೇಷನ್ ಸಿಂಧೂರ್ ಯಶಸ್ಸಿನ ನಂತರ, ಬಿಜೆಪಿ ದೇಶಾದ್ಯಂತ ತಿರಂಗ ಯಾತ್ರೆಯನ್ನು ಆಯೋಜಿಸಿದೆ ಎಂದು ವರದಿ ಹೇಳಿದೆ. ಮೇ 14 ರಂದು ಸೂರತ್‌ನಲ್ಲಿ ತಿರಂಗ ಯಾತ್ರೆಯನ್ನು ಆಯೋಜಿಸಲಾಗಿತ್ತು ಎಂಬ ಮಾಹಿತಿ ಇದರಲ್ಲಿದೆ.

"ತಿರಂಗ ಯಾತ್ರೆಯು ಭಾಗಲ್ ಪ್ರದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಂದ ಪ್ರಾರಂಭವಾಯಿತು. ಯಾತ್ರೆಯು ಚೌಕ್ ಬಜಾರ್ ಜಂಕ್ಷನ್‌ನಲ್ಲಿ ಕೊನೆಗೊಂಡಿತು" ಎಂದು ಬರೆಯಲಾಗಿದೆ.

‘ತಿರಂಗ ಯಾತ್ರೆ ನಡೆಯುತ್ತಿದ್ದಂತೆ ಸೂರತ್‌ನಲ್ಲಿ ಭಾರತೀಯ ಸೇನೆಯನ್ನು ಶ್ಲಾಘಿಸುವ ಘೋಷಣೆಗಳು ಮೊಳಗುತ್ತಿವೆ' ಎಂಬ ಶೀರ್ಷಿಕೆಯಡಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಮೇ 15 ರಂದು ಒಂದು ಲೇಖನವನ್ನು ಪ್ರಕಟಿಸಿತು. "ದಾವೂದಿ ಬೊಹ್ರಾ ಸಮುದಾಯಕ್ಕೆ ಸೇರಿದ ಸೈಫೀ ಸ್ಕೌಟ್ ಸೂರತ್‌ನ ಸಂಗೀತ ಬ್ಯಾಂಡ್‌ಗಳು ಭಾಗಲ್ ಕ್ರಾಸ್‌ರೋಡ್‌ನಿಂದ ಯಾತ್ರೆಯನ್ನು ಮುನ್ನಡೆಸುತ್ತಿರುವುದು ಕಾರ್ಯಕ್ರಮದ ಪ್ರಮುಖ ಅಂಶವಾಗಿದೆ" ಎಂದು ವರದಿ ಹೇಳಿದೆ.

ಈ ಲೀಡ್ ಅನ್ನು ಬಳಸಿಕೊಂಡು, ವೈರಲ್ ವೀಡಿಯೊವನ್ನು ಚಿತ್ರೀಕರಿಸಿದ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ನಾವು ಗೂಗಲ್ ಮ್ಯಾಪ್ಸ್​ನಲ್ಲಿ ಹುಡುಕಿದೆವು. ವೈರಲ್ ವೀಡಿಯೊ ಸೂರತ್‌ನ ಚೌಕ್ ಬಜಾರ್ ರಸ್ತೆಯಲ್ಲಿರುವ ಮಿನಾರೆತ್ ಮಜೀದ್ ಜಂಕ್ಷನ್ ಅನ್ನು ತೋರಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ.

ಈ ಕುರಿತ ಖಚಿತ ಮಾಹಿತಿಗಾಗಿ ನ್ಯೂಸ್ ಮೀಟರ್ ಸೈಫೀ ಸ್ಕೌಟ್ಸ್ ಸೂರತ್ ಅವರನ್ನು ಸಂಪರ್ಕಿಸಿದೆ, ಅವರು ವೈರಲ್ ವೀಡಿಯೊವನ್ನು ಇತ್ತೀಚೆಗೆ ಸೂರತ್‌ನಲ್ಲಿ ನಡೆದ ತಿರಂಗ ಯಾತ್ರೆಯ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸಿದರು. "ಆಪರೇಷನ್ ಸಿಂಧೂರ್‌ನಲ್ಲಿ ಧೈರ್ಯದಿಂದ ಹೋರಾಡಿದ ನಮ್ಮ ಸೈನಿಕರ ಗೌರವಾರ್ಥವಾಗಿ ತಿರಂಗ ಯಾತ್ರೆಯನ್ನು ಆಯೋಜಿಸಲಾಗಿದೆ. ಕೇಂದ್ರ ಸಚಿವ ಸಿಆರ್ ಪಾಟೀಲ್ ಕೂಡ ಯಾತ್ರೆಯಲ್ಲಿ ಭಾಗವಹಿಸಿದ್ದರು" ಎಂದು ಸೈಫೀ ಸ್ಕೌಟ್ಸ್ ಸೂರತ್‌ನ ಸದಸ್ಯ ಅಲಿ ಅಸ್ಗರ್ ನ್ಯೂಸ್‌ ಮೀಟರ್‌ಗೆ ತಿಳಿಸಿದ್ದಾರೆ.

ಆದ್ದರಿಂದ, ವೈರಲ್ ವೀಡಿಯೊವು ಮೇ 14 ರಂದು ಗುಜರಾತ್‌ನ ಸೂರತ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ತಿರಂಗ ಯಾತ್ರೆಯನ್ನು ತೋರಿಸುತ್ತದೆ ಎಂದು ನಾವು ತೀರ್ಮಾನಿಸುತ್ತೇವೆ. ಇದು ಬಲೂಚಿಸ್ತಾನದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸುವುದನ್ನು ತೋರಿಸುವುದಿಲ್ಲ ಎಂದು ಖಚಿತವಾಗಿ ಹೇಳುತ್ತೇವೆ.

Fact Check: Pro-Palestine march in Kerala? No, video shows protest against toll booth

Fact Check: ഓണം ബംപറടിച്ച സ്ത്രീയുടെ ചിത്രം? സത്യമറിയാം

Fact Check: கரூர் கூட்ட நெரிசலில் பாதிக்கப்பட்டவர்களை பனையூருக்கு அழைத்தாரா விஜய்?

Fact Check: Christian church vandalised in India? No, video is from Pakistan

Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್