ಬಿಜೆಪಿ ಸಂಸದ ನರೇಶ್ ಅಗರ್ವಾಲ್ ಹಿಂದೂ ದೇವತೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ನಿಜ, ಆದರೆ...

ಜುಲೈ 1 ಸೋಮವಾರದಂದು ಕಾಂಗ್ರೆಸ್ ಸಂಸದ ಮತ್ತು ನೂತನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭಾ ಕಲಾಪದಲ್ಲಿ ಆರ್ಭಟಿಸಿದ್ದರು.
Naresh Agarwal, Hindu deities
Published on
2 min read

ಜುಲೈ 1 ಸೋಮವಾರದಂದು ಕಾಂಗ್ರೆಸ್ ಸಂಸದ ಮತ್ತು ನೂತನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭಾ ಕಲಾಪದಲ್ಲಿ ಆರ್ಭಟಿಸಿದ್ದರು. ಸಂವಿಧಾನದ ಪ್ರತಿ ಮತ್ತು ಶಿವನ ಚಿತ್ರ ಪ್ರದರ್ಶಿಸಿ ಆಡಳಿತರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ನಾನು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸಾಚಾರ ಮತ್ತು ದ್ವೇಷದಲ್ಲಿ ಮುಳುಗಿದ್ದಾರೆ,' ಎಂದು ಟೀಕಾಪ್ರಹಾರ ನಡೆಸಿದರು. ಇದಕ್ಕೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದ ಬಿಜೆಪಿ, ರಾಹುಲ್ ಗಾಂಧಿ ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಲೋಕಸಭಾ ಕಲಾಪದಲ್ಲಿ ನಡೆದ ಈ ಘಟನೆಯ ಬೆನ್ನಲ್ಲೇ ಬಿಜೆಪಿ ಸಂಸದ ನರೇಶ್ ಚಂದ್ರ ಅಗರ್ವಾಲ್ ಅವರು ಹಿಂದೂ ದೇವರುಗಳನ್ನು ಮದ್ಯದೊಂದಿಗೆ ಹೋಲಿಕೆ ಮಾಡಿ ಕವನ ಓದುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಪಿ ಸಂಸದರಾಗಿ ಅಗರ್ವಾಲ್ ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ ಎಂದು ವೀಡಿಯೊಕ್ಕೆ ಅಡಿಬರಹ ನೀಡಲಾಗಿದೆ.

X (ಹಿಂದೆ ಟ್ವಿಟ್ಟರ್) ಬಳಕೆದಾರರು ಈ ಕುರಿತ ವೀಡಿಯೊವನ್ನು ಹಂಚಿಕೊಂಡಿದ್ದು, “ಬಿಜೆಪಿ ಸಂಸದ ನರೇಶ್ ಅಗರ್ವಾಲ್ ಸಂಸತ್ತಿನಲ್ಲಿ ಈರೀತಿ ಹೇಳುವ ಮೂಲಕ ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ. ಈ ಸಂದರ್ಭ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಕೂಡ ಅವರ ಹೇಳಿಕೆಯನ್ನು ವಿರೋಧಿಸಲಿಲ್ಲ,'' ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಇನ್ನೊಬ್ಬ X ಬಳಕೆದಾರ, ''ಬಿಜೆಪಿ ರಾಜ್ಯಸಭಾ ಸದಸ್ಯ ನರೇಶ್ ಚಂದ್ರ ಅಗರ್ವಾಲ್ ಅವರ ಈ ಕವಿತೆಯಿಂದ ಹಿಂದೂ ಧರ್ಮವನ್ನು ಅವಮಾನಿಸಲಾಗಿದೆಯೇ ಅಥವಾ ಇಲ್ಲವೇ?, ಎಷ್ಟು ಬಿಜೆಪಿ ನಾಯಕರು ಇದರ ವಿರುದ್ಧ ಮಾತನಾಡಿದರು?, ಸಾಮಾನ್ಯ ಜನರನ್ನು ವಂಚಿಸುವುದು ಮಾತ್ರ ನಿಮಗೆ ತಿಳಿದಿದೆಯೇ?,'' ಎಂದು ಬರೆದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, 2017 ರಲ್ಲಿ ಸಮಾಜವಾದಿ ಪಕ್ಷದ ಸಂಸದರಾಗಿದ್ದಾಗ ಅಗರ್ವಾಲ್ ಅವರು ರಾಜ್ಯಸಭೆಯಲ್ಲಿ ಈ ಕವಿತೆಯನ್ನು ಹೇಳಿದ್ದರು ಎಂಬುದು ತಿಳಿಯಿತು.

ವೈರಲ್ ವಿಡಿಯೋದ ನಿಜಾಂಶವನ್ನು ತಿಳಿಯಲು ನಾವು ಗೂಗಲ್‍ನಲ್ಲಿ ವಿಡಿಯೋ ಕೀ ಫ್ರೇಮ್‌ನ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಜುಲೈ 19, 2017 ರಂದು ಮ್ಯಾಂಗೋ ನ್ಯೂಸ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವೀಡಿಯೊದಲ್ಲಿ ಇದರ ತುಣುಕು ಕಂಡುಬಂತು. 'ನರೇಶ್ ಅಗರ್ವಾಲ್ ಆಲ್ಕೋಹಾಲ್ ಬ್ರಾಂಡ್‌ಗಳೊಂದಿಗೆ ಹಿಂದೂ ದೇವರುಗಳನ್ನು ಲಿಂಕ್ ಮಾಡಿದ್ದಾರೆ.' ಎಂದು ಇದರಲ್ಲಿ ಬರೆಯಲಾಗಿದೆ.

ಜುಲೈ 19, 2017 ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ಮತ್ತು ಎನ್‌ಡಿಟಿವಿ ವರದಿಗಳನ್ನು ಕೂಡ ನಾವು ಪರಿಶೀಲಿಸಿದೆವು. ರಾಜ್ಯಸಭೆಯಲ್ಲಿ ಸಮಾಜವಾದಿ ಪಾರ್ಟಿ ನಾಯಕ ಅಗರ್ವಾಲ್ ಅವರು ಹಿಂದೂ ದೇವರುಗಳ ಹೆಸರನ್ನು ಮದ್ಯದೊಂದಿಗೆ ಸೇರಿಸಿದ್ದಾರೆ ಎಂದು ವರದಿ ಮಾಡಿದೆ. ನರೇಶ್ ರಾಜ್ಯಸಭೆಯಲ್ಲಿ, 'ವಿಷ್ಣು ವಿಸ್ಕಿಯಲ್ಲಿ, ಶ್ರೀರಾಮ ರಮ್​ನಲ್ಲಿ, ಮಾತಾ ಜಾನಕಿ ಜಿನ್​ನಲ್ಲಿ ನೆಲೆಸಿದ್ದಾರೆ' ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ರಾಜ್ಯಸಭೆಯಲ್ಲಿ ಭಾರೀ ಕೋಲಾಹಲ ಎದ್ದಿತು. ಬಿಜೆಪಿಯ ಪ್ರತಿಭಟನೆಯ ನಂತರ ಅವರನ್ನು ಕಲಾಪದಿಂದ ಹೊರಹಾಕಲಾಯಿತು. ನಂತರ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಆಗಿನ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆಯನ್ನು ಎನ್‌ಡಿಟಿವಿ ಉಲ್ಲೇಖಿಸಿದೆ, “ಅವರು ಎಲ್ಲ ಹಿಂದೂ ದೇವತೆಗಳನ್ನು ಮದ್ಯದ ಬ್ರ್ಯಾಂಡ್‌ನೊಂದಿಗೆ ಜೋಡಿಸಿ ಮಾತನಾಡಿದ್ದಾರೆ. ಒಂದು ವೇಳೆ ಅವರು ಸಂಸತ್ತಿನ ಹೊರಗೆ ಈ ಹೇಳಿಕೆ ನೀಡಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಾಗುತ್ತಿತ್ತು. ಇತರೆ ಧಾರ್ಮಿಕ ಪಂಗಡಕ್ಕೆ ಹೋಲಿಸಿ ಇದನ್ನು ಮತ್ತೆ ಹೇಳುವ ಧೈರ್ಯ ಅವರಿಗೆ ಇದೆಯೇ?,” ಎಂದು ಜೇಟ್ಲಿ ಪ್ರಶ್ನಿಸಿದ್ದರು.

ಮಾರ್ಚ್ 13, 2018 ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, 1997 ರಿಂದ ಸಮಾಜವಾದಿ ಪಕ್ಷದ ಸದಸ್ಯರಾಗಿದ್ದ ನರೇಶ್ ಅವರು ಪಕ್ಷವನ್ನು ತೊರೆದು 2018 ರಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದರು. ರಾಜ್ಯಸಭೆಯಲ್ಲಿ ಜಯಾ ಬಚ್ಚನ್‌ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಕ್ಕೆ ಕೋಪಗೊಂಡ ನರೇಶ್ ಪಕ್ಷ ತೊರೆದಿದ್ದಾರೆ ಎಂದು ಬರೆಯಲಾಗಿದೆ.

ಹೀಗಾಗಿ ಬಿಜೆಪಿ ಸಂಸದರಾಗಿ ಅಗರ್ವಾಲ್ ಹಿಂದೂ ದೇವತೆಗಳ ಹೆಸರನ್ನು ಮದ್ಯದೊಂದಿಗೆ ಜೋಡಿಸಿದ್ದಾರೆ ಎಂಬ ಹೇಳಿಕೆಯು ಸುಳ್ಳಾಗಿದೆ. ಇದು ತಪ್ಪುದಾರಿಗೆಳೆಯುವಂತಿದೆ. 2017ರಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾಗ ಇವರು ಅವಹೇಳನಕಾರಿ ಹೇಳಿಕೆ ನೀಡಿದ್ದರು.

Related Stories

No stories found.
logo
South Check
southcheck.in