

ಆರ್ಎಸ್ಎಸ್ ನೋಂದಣಿಗೆ ಆಗ್ರಹಿಸಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದ ಬಹಿರಂಗ ಪತ್ರಕ್ಕೆ ಸ್ವತಃ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಜೂನ್ 15 ರಂದು ಪ್ರಿಯಾಂಕ್ ಖರ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ಗೆ ಸುದೀರ್ಘ ಪತ್ರ ಬರೆದಿದ್ದರು. ರಾಷ್ಟ್ರೀಯತೆ, ಶಿಸ್ತು ಮತ್ತು ಕರ್ತವ್ಯದ ಕುರಿತು ನಿರಂತರವಾಗಿ ಮಾತನಾಡುವ ಸಂಘಟನೆಯೊಂದು, ಪಾರದರ್ಶಕತೆ, ಕಾನೂನಿನ ಅನುಸರಣೆ ಮತ್ತು ಭಾರತದ ಸಂವಿಧಾನದ ಬಗೆಗಿನ ಗೌರವವನ್ನೂ ಅಷ್ಟೇ ದೃಢವಾಗಿ ಪ್ರದರ್ಶಿಸಬೇಕು. ಸಾಮಾನ್ಯ ಭಾರತೀಯರು ನಿಯಮಗಳನ್ನು ಪಾಲಿಸಬೇಕೆಂದು ಒತ್ತಾಯಿಸುತ್ತಲೇ, ತಾನು ಮಾತ್ರ ಅದೇ ನಿಯಮಗಳಿಂದ ವಿನಾಯಿತಿ ಪಡೆದುಕೊಳ್ಳುವ ನೈತಿಕ ಹಕ್ಕು ಆರ್ಎಸ್ಎಸ್ಗೆ ಇಲ್ಲ. ಕಾರ್ಮಿಕರು, ಸಣ್ಣ ಸಂಘ - ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಎನ್ಜಿಒಗಳು, ಟ್ರಸ್ಟ್ಗಳು, ಕಂಪನಿಗಳು ಮತ್ತು ನಾಗರಿಕರು ನೋಂದಣಿ, ಲೆಕ್ಕಪರಿಶೋಧನೆ ಮತ್ತು ತೆರಿಗೆ ಪಾವತಿಗೆ ಬದ್ಧರಾಗಿದ್ದಾರೆ. ಆದ್ದರಿಂದ ಆರ್ಎಸ್ಎಸ್ ಕೂಡ ದೇಶದ ಕಾನೂನಿಗೆ ಮಾದರಿಯಾಗಿ ಬದ್ಧವಾಗಿರಬೇಕು ಎಂದು ಹೇಳಿದ್ದರು.
ಈ ಪತ್ರದ ಬೆನ್ನಲ್ಲೇ ಫೇಸ್ಬುಕ್ ಬಳಕೆದಾರರೊಬ್ಬರು ಮೋಹನ್ ಭಾಗವತ್ ಅವರ ವೀಡಿಯೊವೊಂದನ್ನು ಹಂಚಿಕೊಂಡು, ‘‘ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮೋಹನ್ ಭಾಗವತ್ ಮೊದಲ ಪ್ರತಿಕ್ರಿಯೆ’’ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೊದಲ್ಲಿ ಭಾಗವತ್ ಅವರು, ಇದಲ್ಲ ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದಾರೆ. ಆರ್ಎಸ್ಎಸ್ ಯಾವಾಗಲೂ ಬಹಿರಂಗವಾಗಿ ಕಾರ್ಯನಿರ್ವಹಿಸಿದೆ ಮತ್ತು ಎಂದಿಗೂ ರಹಸ್ಯವಾಗಿ ಕಾರ್ಯನಿರ್ವಹಿಸಿಲ್ಲ. ಇದು ಬ್ರಿಟಿಷರ ಕಾಲದಲ್ಲೇ ಜನರ ಇಚ್ಛೆಯಿಂದ ಪ್ರಾರಂಭವಾದ ಸಂಸ್ಥೆ. 100 ವರ್ಷಗಳಿಂದ ಯಾರೂ ನಮಗೆ ರಿಜಿಸ್ಟರ್ ಮಾಡಿ ಎಂದು ಹೇಳಿಲ್ಲ. ನಮ್ಮದೇ ಆದ ಲಿಖಿತ ಸಂವಿಧಾನ ಇದೆ. ಅದನ್ನು 1950ರ ದಶಕದಲ್ಲೇ ನಾವು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆಗ ಸರ್ಕಾರ ಮೊದಲು ರಿಜಿಸ್ಟರ್ ಮಾಡಿ ಆಮೇಲೆ ಸಂವಿಧಾನ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿರಲಿಲ್ಲ. ಸಂಘದ ಬಗ್ಗೆ ಜನರ ಮನಸ್ಸಲ್ಲಿ ಅನುಮಾನ ಮೂಡಿಸುವ ಕೆಲಸ ಇದು. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಒಂದು ಕಡೆ ಸಂಘದ ಸಾಮಾಜಿಕ ಕೆಲಸಗಳಿಗೆ ಉತ್ತೇಜನ ನೀಡುತ್ತಿರಿ. ಮತ್ತೊಂದು ಕಡೆ ಅನುಮಾನ ಹುಟ್ಟಿಸುತ್ತೀರಿ. ಇದಕ್ಕೆಲ್ಲ ಯಾಕೆ ಉತ್ತರ ಕೊಡಬೇಕು? ಎಂದು ಹೇಳಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಬಗ್ಗೆ ಮಾತನಾಡುವ ಮೊದಲೇ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದರು.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ, ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮೋಹನ್ ಭಾಗವತ್ ಪ್ರತಿಕ್ರಿಯೆ ನೀಡಿದ್ದಾರೆಯೇ ಎಂದು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ವಿಶ್ವಾಸರ್ಹ ವರದಿ ನಮಗೆ ಕಂಡುಬಂದಿಲ್ಲ. ಬಳಿಕ ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇದೇ ವೈರಲ್ ವೀಡಿಯೊವನ್ನು ಆರ್ಎಸ್ಎಸ್ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಜೂನ್ 14 ರ ದಿನಾಂಕ ಬರೆದುಕೊಂಡು ಹಂಚಿಕೊಂಡಿದೆ. 14.6.2026 ರಂದು ತ್ರಿಶೂರ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದ ವೀಡಿಯೊ ಇದು ಎಂಬ ಮಾಹಿತಿ ಇದರಲ್ಲಿದೆ.
ಹುಡುಕಾಟದ ವೇಳೆ ಸ್ವತಃ ಪ್ರಿಯಾಂಕ್ ಖರ್ಗೆ ಅವರೇ ಜೂನ್ 15 ರಂದು ವೈರಲ್ ವೀಡಿಯೊವನ್ನು ಹಂಚಿಕೊಂಡು ತಿರುಚಲಾಗಿದೆ ಎಂದು ತಮ್ಮ ಎಕ್ಸ್ನಲ್ಲಿ ಪೋಸ್ಟ್ ಬರೆದಿರುವುದು ಸಿಕ್ಕಿದೆ.
‘‘ಕೆಲವು ಕಡೆ ನನ್ನ ಪತ್ರಕ್ಕೆ ಸರ ಸಂಘ ಸಂಚಾಲಕ ಮೋಹನ್ ಭಾಗವತ್ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಅವರು ಇನ್ನು ಉತ್ತರ ನೀಡಿಲ್ಲ. ಮೋಹನ್ ಭಾಗವತ್ ಅವರು ಜೂನ್ 13 ರಂದು ನೀಡಿದ ಹೇಳಿಕೆಯನ್ನು ತಿರುಚಲಾಗುತ್ತಿದೆ. ನಾನು ನಿನ್ನೆ (ಜೂನ್ 15) ಪತ್ರ ಬಿಡುಗಡೆ ಮಾಡಿದ್ದೇನೆ. ಅದಕ್ಕೂ ಮುನ್ನವೇ ಈ ಹೇಳಿಕೆ ನೀಡಿದ್ದಾರೆ, ಹಾಗಿದ್ದಾಗ ಅದು ಉತ್ತರ ಹೇಗೆ ಆಗಲು ಸಾಧ್ಯ?’’ ಎಂದು ಬರೆದುಕೊಂಡಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮೋಹನ್ ಭಾಗವತ್ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೊ ದಾರಿತಪ್ಪಿಸುವಂತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.