

ಮೂವರು ಯುವಕರನ್ನು ಪೊಲೀಸರು ಬೀದಿಗಳಲ್ಲಿ ಕರೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮನೆಯ ಹೊರಗೆ ಹುಡುಗಿಯರಿಗೆ ಕಿರುಕುಳ ನೀಡಿದ್ದಕ್ಕಾಗಿ ಮುಸ್ಲಿಂ ಯುವಕರಾದ ಎಂ.ಡಿ. ಸಮೀರ್, ನದೀಮ್ ಮತ್ತು ಆಸಿಫ್ ಅಲಿ ಅವರನ್ನು ಪೊಲೀಸರು ಬಂಧಿಸುತ್ತಿರುವ ರೀತಿಯಲ್ಲಿ ಈ ವೀಡಿಯೊ ಪ್ರಸಾರವಾಗುತ್ತಿದೆ. ಮೂವರು ಯುವಕರ ಕೈಗಳನ್ನು ಹಗ್ಗದಿಂದ ಕಟ್ಟಿ ಪೊಲೀಸರು ಲಾಠಿಯಿಂದ ಹೊಡೆಯುತ್ತಿರುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಎಂಡಿ ಸಮೀರ್, ನದೀಮ್ ಮತ್ತು ಆಸಿಫ್ ಅಲಿ ಕೆಲಸ - ಮನೆಯ ಹೊರಗೆ ಹುಡುಗಿಯರಿಗೆ ಕಿರುಕುಳ ಅವರವರ ಮನೆಯ ಮುಂದೆ ಪೊಲೀಸರು ದಂಡಂ ದಶಗುಣಂ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಿಡಿಯೋದಲ್ಲಿರುವವರು ಹುಡುಗಿಯರನ್ನು ಕಿರುಕುಳ ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟ ಮುಸ್ಲಿಂ ಯುವಕರಲ್ಲ, ಬದಲಾಗಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಹಿಂಸಾಚಾರಕ್ಕಾಗಿ ಬಂಧಿಸಲ್ಪಟ್ಟ ಮೂವರು ಪುರುಷರ ವೀಡಿಯೊ ಇದಾಗಿದ್ದು, ಇದರಲ್ಲಿರುವ ಎಲ್ಲರೂ ಹಿಂದೂಗಳು.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಪರಿಶೀಲಿಸಿದಾಗ, ಇದೇ ರೀತಿಯ ದೃಶ್ಯವನ್ನು ಒಳಗೊಂಡಂತೆ MP Talk ತನ್ನ ಯೂಟ್ಯೂಬ್ ಪುಟದಲ್ಲಿ ಹಂಚಿಕೊಂಡ ವರದಿ ಕಂಡುಬಂದಿದೆ. ಏಪ್ರಿಲ್ 20 ರಂದು ಹಂಚಿಕೊಂಡ ವರದಿಯ ಪ್ರಕಾರ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಕಲ್ಲು ತೂರಾಟ ಮತ್ತು ಹಿಂಸಾಚಾರ ಎಸಗಿದ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಿರುವ ದೃಶ್ಯ ಇದಾಗಿದೆ.
ಕಾರು ತೊಳೆಯುವ ಕೇಂದ್ರದ ಮಾಲೀಕರೊಂದಿಗೆ ವಾಗ್ವಾದದ ನಂತರ ದಾಳಿಕೋರರು ರಾತ್ರಿಯಲ್ಲಿ ಅವರ ಮನೆ ಮತ್ತು ಸುತ್ತಮುತ್ತಲಿನ ವಾಹನಗಳನ್ನು ಧ್ವಂಸ ಮಾಡಿದ್ದಾರೆ ಎಂದು ವರದಿ ಹೇಳುತ್ತದೆ. ಬಂಧಿತ ಆರೋಪಿಗಳ ಹೆಸರುಗಳು ಕಿಶನ್ ಅಹಿರ್ವಾರ್, ವಿಶಾಲ್ ಮತ್ತು ವಿಕಾಸ್ ಎಂದು ವೀಡಿಯೊ ವರದಿಯಲ್ಲಿ ಹೇಳಲಾಗಿದೆ. ವೀಡಿಯೊವನ್ನು ಕೆಳಗೆ ನೋಡಬಹುದು.
ನಂತರ ಕೀವರ್ಡ್ ಹುಡುಕಾಟ ನಡೆಸಿದಾಗ ನವಭಾರತ್ ಟೈಮ್ಸ್ ಪ್ರಕಟಿಸಿದ ವರದಿ ಸಿಕ್ಕಿತು, ಅದರಲ್ಲಿ ವೈರಲ್ ವೀಡಿಯೊದ ಸ್ಕ್ರೀನ್ಶಾಟ್ ಕೂಡ ಕಾಣಬಹುದು. ಏಪ್ರಿಲ್ 18 ರಂದು ಪ್ರಕಟವಾದ ವರದಿಯ ಪ್ರಕಾರ, ಏಪ್ರಿಲ್ 16 ರಂದು ಉಜ್ಜಯಿನಿಯ ಬಫ್ನಾ ಪಾರ್ಕ್ ಕಾಲೋನಿಯಲ್ಲಿ ಗಲಭೆ ಸೃಷ್ಟಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. MR-5 ರಸ್ತೆಯಲ್ಲಿ ಕಾರ್ ವಾಶ್ ನಡೆಸುವ ಶೆರಾನ್ ಅಲಿ, ಸಮಯವಿಲ್ಲದ ಕಾರಣ ಯುವಕರ ಕಾರುಗಳನ್ನು ತೊಳೆಯಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದರು.
ಏಪ್ರಿಲ್ 16 ರಂದು, ಬೆಳಗಿನ ಜಾವ 2 ಗಂಟೆ ಸುಮಾರಿಗೆ, ದಾಳಿಕೋರರು ಶೆರಾನ್ ಅಲಿಯವರ ಮನೆಗೆ ತಲುಪಿ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಿದರು. ದಾಳಿಕೋರರು ಆ ಪ್ರದೇಶದಲ್ಲಿ ನಿಲ್ಲಿಸಿದ್ದ ನೆರೆಹೊರೆಯವರಾದ ಅಫ್ರೋಜ್ ಮತ್ತು ಡಾ. ಪ್ರದೀಪ್ ಅಗರ್ವಾಲ್ ಅವರ ಕಾರುಗಳಿಗೂ ಹಾನಿ ಮಾಡಿದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದರು. ಅವರಲ್ಲಿ ಮೂವರು, ಕಿಶನ್ ಅಹಿರ್ವಾರ್, ವಿಶಾಲ್ ಮತ್ತು ವಿಕಾಸ್ ಅವರನ್ನು ಏಪ್ರಿಲ್ 17 ರಂದು ಬಂಧಿಸಲಾಯಿತು. ಪೊಲೀಸರು ಹಿಂಸಾಚಾರ ನಡೆದ ಅದೇ ಸ್ಥಳದಲ್ಲಿ ಆರೋಪಿಗಳನ್ನು ಮೆರವಣಿಗೆ ಮಾಡಿ ಲಾಠಿಯಿಂದ ಹೊಡೆದರು ಎಂಬ ಮಾಹಿತಿ ಇದರಲ್ಲಿದೆ.
Akshar Vishwa Ujjain ಎಂಬ ಸ್ಥಳೀಯ ಮಾಧ್ಯಮ ಕೂಡ ಏಪ್ರಿಲ್ 18 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಜೊತೆ ಸುದ್ದಿ ಪ್ರಕಟಿಸಿದ್ದು, ಉಜ್ಜಯಿನಿಯ ಚಿಮನ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಫ್ನಾ ಪಾರ್ಕ್ ಪ್ರದೇಶದಲ್ಲಿ ವಾಹನಗಳನ್ನು ಧ್ವಂಸ ಮಾಡಿ ಕಲ್ಲು ತೂರಾಟ ನಡೆಸುತ್ತಿದ್ದ ದುಷ್ಕರ್ಮಿಗಳಿಗೆ ಪೊಲೀಸರು ಕಠಿಣ ಪಾಠ ಕಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಅಪರಾಧಿಗಳನ್ನು ಗುರುತಿಸಿದ ನಂತರ, ಪೊಲೀಸರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದರು; ಠಾಣೆಯ ಉಸ್ತುವಾರಿ ವಿವೇಕ್ ಕನೋಡಿಯಾ ಅವರ ನೇತೃತ್ವದಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಿದ ತಂಡವು ಶುಕ್ರವಾರ ಮಧ್ಯಾಹ್ನದ ವೇಳೆಗೆ ಕಿಶನ್, ವಿಕಾಸ್ ಮತ್ತು ವಿಶಾಲ್ ಅವರನ್ನು ಬಂಧಿಸಿತು ಎಂದು ಬರೆಯಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಹುಡುಗಿಯರಿಗೆ ಕಿರುಕುಳ ನೀಡಿದ್ದಕ್ಕಾಗಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೊ ವಾಸ್ತವವಾಗಿ ಹಿಂಸಾಚಾರ ಎಸಗಿದ್ದಕ್ಕಾಗಿ ಬಂಧಿಸಲ್ಪಟ್ಟ ಮೂವರು ಹಿಂದೂ ಯುವಕರದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.