

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕೆಲವು ಮುಸ್ಲಿಮರು ರೈಲಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಾಣಬಹುದು. ಇದು ಹೈದರಾಬಾದ್ನಲ್ಲಿ ನಡೆದ ಘಟನೆ ಎಂಬ ರೀತಿಯಲ್ಲಿ ವೀಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ. ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಹೈದರಾಬಾದ್ train ನಲ್ಲೀ ಯಾವಾಗಲೂ ಕಾಣ ಬರುವ ದೃಶ್ಯ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಹೈದರಾಬಾದ್ನದ್ದಲ್ಲ, 2022 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ ಅಕ್ಟೋಬರ್ 23, 2022 ರಂದು ಎನ್ಡಿಟಿವಿ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಇದೇ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿದೆ. "ರೈಲಿನೊಳಗೆ ಜನರು ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೊದ ಕುರಿತು ತನ್ನ ತನಿಖೆಯನ್ನು ಮುಂದುವರಿಸುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ಕೀವರ್ಡ್ ಹುಡುಕಾಟ ನಡೆಸಿದಾಗ ವೈರಲ್ ಚಿತ್ರದೊಂದಿಗೆ ದಿ ಹಿಂದೂ ಪ್ರಕಟಿಸಿದ ವರದಿ ಸಿಕ್ಕಿದೆ. ಈ ವೀಡಿಯೊವನ್ನು ಬಿಜೆಪಿ ನಾಯಕ ದೀಪ್ಲಾಲ್ ಭಾರ್ತಿ ಹಂಚಿಕೊಂಡಿದ್ದಾರೆ ಮತ್ತು ಇದರ ನಂತರ ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸತ್ಯಾಗ್ರಹ ಎಕ್ಸ್ಪ್ರೆಸ್ ರೈಲು ಉತ್ತರ ಪ್ರದೇಶದ ಕುಶಿನಗರ ರೈಲ್ವೆ ನಿಲ್ದಾಣ ಪ್ರದೇಶವನ್ನು ತಲುಪಿದಾಗ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದು ವರದಿ ಹೇಳುತ್ತದೆ. ಅಕ್ಟೋಬರ್ 24, 2022 ರಂದು ಪ್ರಕಟವಾದ ವರದಿಯ ಸ್ಕ್ರೀನ್ಶಾಟ್ ಅನ್ನು ಕೆಳಗೆ ನೋಡಬಹುದು.
ವೈರಲ್ ಆದ ವೀಡಿಯೊವನ್ನು ಉತ್ತರ ಪ್ರದೇಶದ ಮಾಜಿ ಶಾಸಕ ದೀಪ್ಲಾಲ್ ಭಾರ್ತಿ ಚಿತ್ರೀಕರಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ದೀಪ್ಲಾಲ್ ಭಾರ್ತಿ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಈ ವೀಡಿಯೊ ತೆಗೆದವರು ನಾನೇ ಮತ್ತು ಈ ಘಟನೆ ಅಕ್ಟೋಬರ್ 20, 2022 ರಂದು ನಡೆದಿದ್ದು, ಸ್ಲೀಪರ್ ಕೋಚ್ನಲ್ಲಿ ನಾಲ್ವರು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ. ರೈಲು ಹತ್ತುವಾಗ ಮತ್ತು ಇಳಿಯುವಾಗ ಇತರ ಪ್ರಯಾಣಿಕರಿಗೆ ಕೋಚ್ನಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಅನಾನುಕೂಲತೆ ಉಂಟಾಗಿದೆ ಎಂದು ಅವರು ಹೇಳಿದರು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ರೈಲಿನಲ್ಲಿ ಪ್ರಾರ್ಥನೆ ಮಾಡುತ್ತಿರುವ ಜನರ ವೀಡಿಯೊ ಹೈದರಾಬಾದ್ನದ್ದಲ್ಲ, ಬದಲಾಗಿ ಉತ್ತರ ಪ್ರದೇಶದದ್ದು ಎಂಬುದು ಸ್ಪಷ್ಟವಾಗುತ್ತದೆ.