
ಕೇರಳದ ಮುಸ್ಲಿಮರು ಪಾಕಿಸ್ತಾನ ಪರ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬರ್ಥದಲ್ಲಿ ಹೇಳಿಕೊಳ್ಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಈ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, ಹಸಿರು ಬಣ್ಣದ ಜೆರ್ಸಿಗಳನ್ನು ಧರಿಸಿ ಬಿಳಿ ಅರ್ಧಚಂದ್ರನ ಚಿಹ್ನೆಯಿರುವ ಹಸಿರು ಧ್ವಜಗಳನ್ನು ಹಿಡಿದುಕೊಂಡು ರ್ಯಾಲಿಯಲ್ಲಿ ಪುರುಷರ ಗುಂಪೊಂದು ಘೋಷಣೆಗಳನ್ನು ಕೂಗುತ್ತಿರುವುದನ್ನು ನಾವು ನೋಡಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಏಪ್ರಿಲ್ 25, 2025 ರಂದು ಈ ವೀಡಿಯೊ ಹಂಚಿಕೊಂಡು, ‘‘ಇವರು ಪಾಕಿಸ್ತಾನದ ಜನಗಳೆಲ್ಲ, ನಮ್ಮ ಪಕ್ಕದ ಕೇರಳ ರಾಜ್ಯದ ಜನರು. ಯಾರ ಪರವಾಗಿ ಪ್ರತಿಭಟನೆ ಮಾಡ್ತಾ ಇದ್ದಾರೆ ನೀವೇ ನೋಡಿ, ನಾವು ರಾಜ್ಯ, ಭಾಷೆ ಹೆಸರಿನಲ್ಲಿ ಕಿತ್ತಾಡುತ್ತಾಡುತ್ತಿದ್ದೇವೆ, ಇಂಥವರಿಗೆ ಯಾವ ಭಾಷೆ ರಾಜ್ಯದ ಅವಶ್ಯಕತೆ ಇಲ್ಲ, ನಾವುಗಳು ಈಗಲಾದರೂ, ಭಾಷೆ ರಾಜ್ಯದ ಹೆಸರೇಳಿಕೊಂಡು ಜಗಳವಾಡುವುದನ್ನು ಬಿಟ್ಟು ದೇಶ ಮತ್ತು ಧರ್ಮದ ಪರವಾಗಿ ನಾವೆಲ್ಲರೂ ಒಂದಾಗಬೇಕಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ವೈರಲ್ ಆದ ಈ ಹೇಳಿಕೆಗಳು ಸುಳ್ಳು ಎಂದು ಸೌತ್ ಚೆಕ್ ಕಂಡುಕೊಂಡಿದೆ. ಈ ವೀಡಿಯೊದಲ್ಲಿ ಕೇರಳದಲ್ಲಿ ಮುಸ್ಲಿಮರ ಪಾಕಿಸ್ತಾನ ಪರ ರ್ಯಾಲಿ ನಡೆಸುತ್ತಿಲ್ಲ, ಅಥವಾ ಪಾಕಿಸ್ತಾನ ಧ್ವಜಗಳನ್ನು ಹಿಡಿದಿರುವ ಪುರುಷರೂ ಇಲ್ಲ. ಏಪ್ರಿಲ್ 16 ರಂದು ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಿಡಿದಿರುವುದನ್ನು ಇದು ತೋರಿಸುತ್ತದೆ.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇರಳದಲ್ಲಿ ಪಾಕಿಸ್ತಾನ ಪರ ರ್ಯಾಲಿಗಳು ನಡೆದಿರುವ ಬಗ್ಗೆ ನಮಗೆ ಯಾವುದೇ ಸುದ್ದಿ ವರದಿಗಳು ಕಂಡುಬಂದಿಲ್ಲ. ಕೀಫ್ರೇಮ್ಗಳನ್ನು ಜೂಮ್ ಮಾಡಿ ನೋಡಿದಾಗ, ಪುರುಷರು ಧರಿಸಿರುವ ಹಸಿರು ಜೆರ್ಸಿಗಳ ಮೇಲೆ 'ಅರಂಗಡಿ' ಎಂದು ಬರೆಯಲಾಗಿದೆ ಎಂದು ನಾವು ಕಂಡುಕೊಂಡೆವು. ಧ್ವಜಗಳು ಮತ್ತು ಜೆರ್ಸಿಗಳ ಮೇಲಿನ ಅರ್ಧಚಂದ್ರ ಚಿಹ್ನೆಯು ಪಾಕಿಸ್ತಾನದ ರಾಷ್ಟ್ರೀಯ ಧ್ವಜಕ್ಕಿಂತ ಭಿನ್ನವಾಗಿ ಕಾಣುತ್ತದೆ. ಅಲ್ಲದೆ, ವೈರಲ್ ವೀಡಿಯೊದಲ್ಲಿರುವ ಧ್ವಜವು ಪಾಕಿಸ್ತಾನ ರಾಷ್ಟ್ರೀಯ ಧ್ವಜದಲ್ಲಿ ಕಾಣುವ ಬಿಳಿ ಲಂಬವಾದ ಪಟ್ಟಿಯನ್ನು ಹೊಂದಿಲ್ಲ.
ವೈರಲ್ ವೀಡಿಯೊದಲ್ಲಿರುವ ಜೆರ್ಸಿಗಳು ಮತ್ತು ಧ್ವಜಗಳು ಪಾಕಿಸ್ತಾನದ ರಾಷ್ಟ್ರೀಯ ಧ್ವಜದಂತಲ್ಲ ಎಂಬುದು ಸ್ಪಷ್ಟವಾಗಿದೆ. ವೀಡಿಯೊದಲ್ಲಿ, ಪುರುಷರು ಐಯುಎಂಎಲ್ನ ಕೇರಳ ರಾಜ್ಯ ಅಧ್ಯಕ್ಷ ಸೈಯದ್ ಸಾದಿಕಾಲಿ ಶಿಹಾಬ್ ತಂಗಲ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕೇಳಿಸುತ್ತದೆ. ವೀಡಿಯೊದಲ್ಲಿ ಎಲ್ಲಿಯೂ "ಪಾಕಿಸ್ತಾನ" ಅಥವಾ "ಪಹಲ್ಗಮ್" ನಂತಹ ಪದಗಳು ನಮಗೆ ಕೇಳಿಸುವುದಿಲ್ಲ.
ವೀಡಿಯೊದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿದಾಗ, 'arangadi_official_page' ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಅಪ್ಲೋಡ್ ಮಾಡಲಾದ ಅದೇ ವೈರಲ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು ಏಪ್ರಿಲ್ 16 ರಂದು 'ಕೋಝಿಕೋಡ್' ಎಂಬ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಲಾಗಿದೆ.
ಅದೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಏಪ್ರಿಲ್ 15 ರಂದು ಸೈಯದ್ ಸಾದಿಕಾಲಿ ಶಿಹಾಬ್ ತಂಙಲ್ ಅವರ ಚಿತ್ರವಿರುವ ಬ್ಯಾನರ್ ಅನ್ನು ಹಂಚಿಕೊಳ್ಳಲಾಗಿದೆ. ಏಪ್ರಿಲ್ 16 ರಂದು ಮಧ್ಯಾಹ್ನ 3 ಗಂಟೆಗೆ ಕೋಝಿಕ್ಕೋಡ್ನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಲಾಗುತ್ತಿದೆ ಎಂದು ಬ್ಯಾನರ್ನಲ್ಲಿ ಹೇಳಲಾಗಿದೆ.
ಏಪ್ರಿಲ್ 4 ರಂದು ಟೈಮ್ಸ್ ಆಫ್ ಇಂಡಿಯಾ 'ಐಯುಎಂಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಾಮೂಹಿಕ ಪ್ರತಿಭಟನೆ ನಡೆಸಲಿದೆ' ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಿತು. "ಏಪ್ರಿಲ್ 16 ರಂದು ಕೋಝಿಕ್ಕೋಡ್ನಲ್ಲಿ ನಡೆಯಲಿರುವ ಮೆಗಾ ವಕ್ಫ್ ರಕ್ಷಣಾ ರ್ಯಾಲಿಯೊಂದಿಗೆ ದೇಶಾದ್ಯಂತ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಲು ಐಯುಎಂಎಲ್ ನಿರ್ಧರಿಸಿದೆ" ಎಂದು ವರದಿ ಹೇಳಿದೆ.
ಏಪ್ರಿಲ್ 16 ರ ವಕ್ಫ್ ಕಾಯ್ದೆ ಪ್ರತಿಭಟನೆಯ ಕುರಿತಾದ ವರದಿಯನ್ನು ಅದೇ ದಿನ ಮಕ್ತೂಬ್ ಮೀಡಿಯಾ ಪ್ರಕಟಿಸಿತು. 'ಕೋಜಿಕೋಡ್ನಲ್ಲಿ ಹೊಸ ವಕ್ಫ್ ಕಾನೂನಿನ ವಿರುದ್ಧ ಐಯುಎಂಎಲ್ನ ಪ್ರತಿಭಟನೆಯಲ್ಲಿ ಲಕ್ಷಗಟ್ಟಲೆ ಜನರು ಸೇರುತ್ತಾರೆ, ಆಯೋಜಕರು ಭಾರತದಲ್ಲಿ ಅತಿದೊಡ್ಡ ಪ್ರತಿಭಟನೆ ಎಂದು ಹೇಳುತ್ತಾರೆ' ಎಂದು ಬರೆಯಲಾಗಿದೆ.
ಆನ್ಲೈನ್ನಲ್ಲಿ ಪ್ರಸಾರವಾಗುತ್ತಿರುವ ವೀಡಿಯೊ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕೋಝಿಕ್ಕೋಡ್ನಲ್ಲಿ ನಡೆದ ರ್ಯಾಲಿಯದ್ದು ಎಂದು ಐಯುಎಂಎಲ್ನ ಕಾಸರಗೋಡು ಘಟಕದ ಅಧ್ಯಕ್ಷ ಅಸಿಮ್ ಅರಂಗಡಿ ದೃಢಪಡಿಸಿದರು. "ಇದು ರಾಜ್ಯಾದ್ಯಂತದ ಭಾಗವಹಿಸುವವರನ್ನು ಒಳಗೊಂಡ ರಾಜ್ಯವ್ಯಾಪಿ ರ್ಯಾಲಿಯಾಗಿತ್ತು ಮತ್ತು ಕಾಸರಗೋಡಿನಿಂದ ಸುಮಾರು 80 ಜನರು ಭಾಗವಹಿಸಿದ್ದರು. ಏಪ್ರಿಲ್ 16 ರಂದು ಕೋಝಿಕ್ಕೋಡ್ನಲ್ಲಿ ನಡೆದ ರ್ಯಾಲಿಯ ದಿನದಂದು ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ" ಎಂದು ಅಸಿಮ್ ಹೇಳಿದರು.
ಏಪ್ರಿಲ್ 16 ರಂದು ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ಪ್ರತಿಭಟನೆಯ ಸಂದರ್ಭದಲ್ಲಿ ಈ ವೈರಲ್ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕೇರಳದಲ್ಲಿ ಮುಸ್ಲಿಮರು ನಡೆಸಿದ ಪಾಕಿಸ್ತಾನ ಪರ ರ್ಯಾಲಿಯನ್ನು ಇದು ತೋರಿಸುವುದಿಲ್ಲ. ರ್ಯಾಲಿಯಲ್ಲಿ, ಪಾಕಿಸ್ತಾನದ ರಾಷ್ಟ್ರೀಯ ಧ್ವಜಗಳು ಮತ್ತು ಜೆರ್ಸಿಗಳನ್ನು ಬಳಸಲಾಗಿಲ್ಲ; ಐಯುಎಂಎಲ್ ಪಕ್ಷದ ಧ್ವಜಗಳನ್ನು ಬಳಸಲಾಗಿದೆ. ಆದ್ದರಿಂದ, ವೈರಲ್ ಆಗಿರುವ ಈ ಹಕ್ಕುಗಳು ಸುಳ್ಳು ಎಂದು ತೀರ್ಮಾನಿಸುತ್ತೇವೆ.