
ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಡಿದು ಕರೆದುಕೊಂಡು ಹೋಗುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸುತ್ತಿರುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇಂದು ಲಕ್ನೋದಲ್ಲಿ ಬೆಳಿಗ್ಗೆಯಿಂದ ಕೆಂಪು ಟೋಪಿ ಧರಿಸಿದ ಗೂಂಡಾಗಳನ್ನು ಹೊಡೆಯುವ ಕಾರ್ಯಕ್ರಮ ನಡೆಯುತ್ತಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಇತ್ತೀಚಿನದಲ್ಲ, ಇದು 2020 ರದ್ದಾಗಿದೆ. ಆ ಸಂದರ್ಭ ಎಸ್ಪಿ ನಾಯಕಿ ಯಮೀನ್ ಖಾನ್ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಘಟನೆ ಇದಾಗಿದೆ.
ನಿಜಾಂಶ ತಿಳಿಯಲು ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಯೂಟ್ಯೂಬ್ನಲ್ಲಿ ಅದೇ ವೀಡಿಯೊವನ್ನು ಡಿಸೆಂಬರ್ 10, 2020 ರಂದು ಅಪ್ಲೋಡ್ ಮಾಡಿರುವುದನ್ನು ಕಂಡುಕೊಂಡಿದ್ದೇವೆ. ‘‘ಪೊಲೀಸರು ಥಳಿಸಿದ ನಂತರವೂ ಎಸ್ಪಿ ಕಾರ್ಯಕರ್ತ ಯಮೀನ್ ಖಾನ್ ಅಖಿಲೇಶ್ ಯಾದವ್ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಲೇ ಇದ್ದರು’’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಇದರಿಂದ ಸುಳಿವು ಪಡೆದ ನಾವು ಸಂಬಂಧಿತ ಕೀವರ್ಡ್ಗಳೊಂದಿಗೆ ಹುಡುಕಿದಾಗ ಅದೇ ಘಟನೆಯನ್ನು ನವಭಾರತ್ ಟೈಮ್ಸ್ ಡಿಸೆಂಬರ್ 7, 2020 ರಂದು ವರದಿ ಮಾಡಿರುವುದು ಸಿಕ್ಕಿದೆ. ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ, ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಮತ್ತು ಮಾಜಿ ಸಚಿವ ಮೊಹಮ್ಮದ್ ಯಾಮೀನ್ ಖಾನ್ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿ ಸೂಚಿಸುತ್ತದೆ.
ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸೋಮವಾರ ಕನ್ನೌಜ್ಗೆ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಹೋಗುತ್ತಿದ್ದರು. ಆದಾಗ್ಯೂ, ಅವರನ್ನು ರಾಜಧಾನಿಯಲ್ಲಿಯೇ ತಡೆದು ಗಲಾಟೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಅಖಿಲೇಶ್ ಅವರನ್ನು ವಶಕ್ಕೆ ಪಡೆದ ಸುದ್ದಿ ಹರಡಿದ ತಕ್ಷಣ, ಎಸ್ಪಿ ಕಾರ್ಯಕರ್ತರು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ, ಮಾಜಿ ಸಚಿವ ಮೊಹಮ್ಮದ್ ಯಮೀನ್ ಖಾನ್ ಕೂಡ ಪೊಲೀಸರ ದೌರ್ಜನ್ಯಕ್ಕೆ ಒಳಗಾದರು. ಯಮೀನ್ ಖಾನ್ ಪೊಲೀಸ್ ವ್ಯಾನ್ ಕಡೆಗೆ ಓಡಿ ಘೋಷಣೆಗಳನ್ನು ಕೂಗುತ್ತಾ ಹೋದಾಗ ಅಧಿಕಾರಿಗಳು ಅವರನ್ನು ಸುತ್ತುವರೆದು ಲಾಠಿಗಳಿಂದ ಹೊಡೆದರು, ಅವರ ತಲೆಗೆ ಹೊಡೆದ ಪರಿಣಾಮ ರಕ್ತಸ್ರಾವವಾಯಿತು. ಪ್ರಜ್ಞೆ ಕಳೆದುಕೊಂಡಿದ್ದರೂ, ಅಧಿಕಾರಿಗಳು ತಮ್ಮ ಹಲ್ಲೆಯನ್ನು ಮುಂದುವರೆಸಿದರು’’ ಎಂಬ ಮಾಹಿತಿ ಇದರಲ್ಲಿದೆ.
ಆದ್ದರಿಂದ, ವೈರಲ್ ವೀಡಿಯೊ ಹಳೆಯದು ಮತ್ತು ಇತ್ತೀಚಿನ ಪ್ರತಿಭಟನೆಗೆ ಸಂಬಂಧಿಸಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.