ಸಾಮಾಜಿಕ ಮಾಧ್ಯಮದಲ್ಲಿ ಭಯಾನಕ ಫೋಟೋ ಒಂದು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ವ್ಯಕ್ತಿಯೊರ್ವ ರಕ್ತದ ಕಲೆಯಿರುವ ಅಂಗಿಯಲ್ಲಿ ಮತ್ತೊಬ್ಬ ವ್ಯಕ್ತಿಯ ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ತಿರುಗಾಡುತ್ತಿರುವುದನ್ನು ಕಾಣಬಹುದು. ಈ ವ್ಯಕ್ತಿ ತನ್ನ ಸಹೋದರಿಯ ಅತ್ಯಾಚಾರಿಯನ್ನು ಕೊಂದು ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ಹೋಗುತ್ತಿದ್ದಾನೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಹಂಚಿಕೊಂಡಿದ್ದಾರೆ.
ವೈರಲ್ ಆಗುತ್ತಿರುವ ಫೋಟೋದಲ್ಲಿ ''ಈ ವ್ಯಕ್ತಿಯ ಸಹೋದರಿಯನ್ನು ಅತ್ಯಾಚಾರ ಮಾಡಲಾಗಿದೆ. ಈ ವಿಚಾರ ತಿಳಿದ ತಕ್ಷಣ ಆಕೆಯ ಅಣ್ಣ ಅತ್ಯಾಚಾರಿಯ ತಲೆಯನ್ನು ಕತ್ತರಿಸಿ, ರುಂಡವನ್ನು ಪೊಲೀಸ್ ಸ್ಟೇಷನ್ಗೆ ತೆಗೆದುಕೊಂಡು ಹೋಗುತ್ತಿದ್ದಾನೆ,'' ಎಂದು ಬರೆಯಲಾಗಿದೆ.
ಶ್ರೆಯಿ ಎಂಬ ಎಕ್ಸ್ ಬಳಕೆದಾರರು ಜುಲೈ 22, 2024 ರಂದು ಈ ಫೋಟೋವನ್ನು ಹಂಚಿಕೊಂಡಿದ್ದು, ''ಭಾರತದ ನಾಗರಿಕರು ಅತ್ಯಾಚಾರಿಗಳಿಗೆ ಹೇಗೆ ಶಿಕ್ಷೆಯಾಗಬೇಕೆಂದು ಬಯಸುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಭಾರತದ ನ್ಯಾಯಾಂಗ ವ್ಯವಸ್ಥೆಗೆ ಕೆಲವು ಅನುಷ್ಠಾನದ ಅಗತ್ಯವಿದೆ,'' ಎಂದು ಕ್ಯಾಪ್ಶನ್ ನೀಡಿದ್ದಾರೆ.
ಹಾಗೆಯೆ ಸಾನ್ವಿ ಎಂಬ ಎಕ್ಸ್ ಬಳಕೆದಾರರು ಕೂಡ ಇದೇ ಫೋಟೋವನ್ನು ಹಂಚಿಕೊಂಡಿದ್ದು, ''ಈ ವ್ಯಕ್ತಿಗೆ ಸೆಲ್ಯೂಟ್ ಹೊಡೆಯಬೇಕು,'' ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ವೈರಲ್ ಫೋಟೋದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ತಂಗಿಯ ಅತ್ಯಾಚಾರ ಮಾಡಿದವನ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ಹೋಗುತ್ತಿದ್ದಾನೆ ಎಂದು ಹೇಳಲಾಗುತ್ತಿರುವ ಈ ಫೋಟೋದಲ್ಲಿರುವ ಬರಹ ಫೇಕ್ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಈ ಸಂದರ್ಭ 2018ರ ಅಕ್ಟೋಬರ್ 4 ರಂದು ಕರ್ನಾಟಕದ ಪ್ರಸಿದ್ಧ ಡಿಜಿಟಲ್ ಮಾಧ್ಯಮ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ ಕಂಡುಬಂತು. ಇದರಲ್ಲಿ 'ಸ್ನೇಹಿತನ ರುಂಡದೊಂದಿಗೆ ಠಾಣೆಗೆ ಬಂದ: ವೀಡಿಯೋ' ಎಂಬ ಶೀರ್ಷಿಕೆಯೊಂದಿಗೆ ಮಾಹಿತಿ ನೀಡಲಾಗಿದೆ.
''ತಾಯಿಯ ಬಗ್ಗೆ ಕೆಟ್ಟದಾಗಿ ಮಾತಾನಾಡಿದ್ದಕ್ಕೆ ಸ್ನೇಹಿತನ ರುಂಡ ಕತ್ತರಿಸಿ, ತಲೆಯನ್ನು ಕೈಯಲ್ಲಿ ಹಿಡಿದು ಪೊಲೀಸ್ ಠಾಣೆಗೆ ಬಂದ ಘಟನೆ ಮಂಡ್ಯದ ಮಳವಳ್ಳಿ ಠಾಣೆಯಲ್ಲಿ ನಡೆದಿದೆ. ಸೆ. 29ರಂದು ಘಟನೆ ನಡೆದಿದ್ದು, ಪಶುಪತಿ ಎಂಬಾತ ತನ್ನ ಸ್ನೇಹಿತ ಗಿರೀಶ್ ಎಂಬವನ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದಿದ್ದಾನೆ. ವಿಚಾರಣೆ ವೇಳೆ ಗಿರೀಶ್ ತನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ಇಬ್ಬರ ನಡುವೆ ಜಗಳ ಉಂಟಾಗಿದೆ. ಇದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,'' ಎಂದು ಬರೆಯಲಾಗಿದೆ.
ಹಾಗೆಯೆ ಸೆಪ್ಟೆಂಬರ್ 29, 2018 ರಂದು ಕನ್ನಡಪ್ರಭ ವೆಬ್ಸೈಟ್ನಲ್ಲಿ ಕೂಡ ಈ ಬಗ್ಗೆ ವರದಿ ಆಗಿದೆ. 'ತನ್ನ ತಾಯಿಯನ್ನು ಕೆಟ್ಟದಾಗಿ ನೋಡಿ, ಸನ್ನೆ ಮಾಡಿ ಕರೆದ ಎಂಬ ಕಾರಣಕ್ಕೆ ಮಗ ಆ ವ್ಯಕ್ತಿಯ ತಲೆ ಕಡಿದು, ಅದನ್ನು ಪೊಲೀಸ್ ಠಾಣೆಗೆ ತಂದು ಶರಾಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕೆಬಾಗಿಲು ಗ್ರಾಮದಲ್ಲಿ ನಡೆದಿದೆ,' ಎಂದು ಬರೆಯಲಾಗಿದೆ.
ಹೀಗಾಗಿ ತಂಗಿಯ ಅತ್ಯಾಚಾರ ಮಾಡಿದ್ದಕ್ಕೆ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ಹೋಗುತ್ತಿದ್ದಾನೆ ಎಂದು ವೈರಲ್ ಆಗುತ್ತಿರುವ ಈ ಫೋಟೋದಲ್ಲಿರುವ ಬರಹ ಸುಳ್ಳಾಗಿದೆ. ಹಳೆಯ ಘಟನೆಗೆ ತಪ್ಪು ಶೀರ್ಷಿಕೆ ನೀಡಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.