
ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಕೆಲವು ಯುವಕರು ಧಾರ್ಮಿಕ ವಿಗ್ರಹಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಾಣಬಹುದು. ವಿಡಿಯೋದಲ್ಲಿ, ಒಂದು ಕೈಗೆ ಮಾತ್ರ ಶರ್ಟ್ ಹಾಕದ ಯುವಕನೊಬ್ಬ ಭಗವಾನ್ ಶ್ರೀರಾಮ ಮತ್ತು ಹನುಮಂತನ ವಿಗ್ರಹಗಳಿಗೆ ಹೊಡೆಯುತ್ತಾರೆ. ಇದರ ಜೊತೆಗೆ ಆತನ ಇತರ ಸಹಚರರು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಕ್ಯಾಮೆರಾದ ಹಿಂದಿನಿಂದ ನಗುತ್ತಾ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಈ ಕೃತ್ಯವನ್ನು ಎಸಗಿದವರು ಮುಸ್ಲಿಮರು ಎಂಬ ಹೇಳಿಕೆಯೊಂದಿಗೆ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಜಾತ್ಯಾತೀತ ಸು**ಳೇ ನೊಡ್ರೋ ಇಲ್ಲಿ..!! ಛತ್ತೀಸ್ಗಢದ ಕಂಕೇರ್ ಜಿಲ್ಲೆಯಲ್ಲಿ ಮುಸ್ಲಿಮರು ರಾಮ ಮತ್ತು ಹನುಮಂತನ ವಿಗ್ರಹಗಳನ್ನು ಹೇಗೆ ಮಾಡುತ್ತಿದ್ದಾರೆ ನೋಡಿ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ರಾಮ ಮತ್ತು ಹನುಮಂತನ ವಿಗ್ರಹಕ್ಕೆ ಹಾನಿ ಮಾಡುತ್ತಿರುವ ಈ ವ್ಯಕ್ತಿಗಳು ಮುಸ್ಲಿಂರಲ್ಲಿ ಬದಲಾಗಿ ಅವರು ಹಿಂದೂಗಳಾಗಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ Chauchak Media ಆಗಸ್ಟ್ 11 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ‘‘ಛತ್ತೀಸ್ಗಢದಲ್ಲಿ ಕುಡಿದ ಮತ್ತಿನಲ್ಲಿ ಕೆಲವರು ಶ್ರೀರಾಮ ಮತ್ತು ಹನುಮಾನ್ ವಿಗ್ರಹಗಳೊಂದಿಗೆ ಅನುಚಿತವಾಗಿ ವರ್ತಿಸಿದ ವಿಡಿಯೋ ಕಂಕೇರ್ ಜಿಲ್ಲೆಯಿಂದ ಹೊರಬಂದಿದೆ’’ ಎಂಬ ಶೀರ್ಷಿಕೆ ನೀಡಲಾಗಿದೆ.
ವರದಿಯ ಪ್ರಕಾರ, ‘‘ಛತ್ತೀಸ್ಗಢದ ಕಂಕೇರ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ಪ್ರದೇಶದ ನವಗಾಂವ್ನಲ್ಲಿರುವ ಇಶಾನ್ವನ್ನಲ್ಲಿ ಈ ಘಟನೆ ನಡೆದಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೀಡಿಯೊದಲ್ಲಿ ಕಾಣುವ ಯುವಕರು ಕೊಂಡಗಾಂವ್ ಜಿಲ್ಲೆಯ ಅಲೋರ್ ಗ್ರಾಮದ ನಿವಾಸಿಗಳಾದ ಮಹೇಶ್ ಕೊರ್ರಂ, ಶಿವಲಾಲ್, ಲೋಚನ್, ಸಂಜೀವ್ ಮಾರ್ಕಮ್. ಮೂರರಿಂದ ನಾಲ್ಕು ಯುವಕರು ಈ ಆಕ್ಷೇಪಾರ್ಹ ನಡವಳಿಕೆಯಲ್ಲಿ ನೇರವಾಗಿ ಭಾಗಿಯಾಗಿದ್ದರೆ, ಇತರರು ವೀಡಿಯೊ ಮಾಡುತ್ತಿದ್ದರು’’ ಎಂದು ಹೇಳಲಾಗಿದೆ.
Fatafat News ಕೂಡ ಆಗಸ್ಟ್ 11 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಮಾಡಿದೆ. ‘‘ಕಂಕೇರ್ ಜಿಲ್ಲೆಯ ಪ್ರವಾಸಿ ತಾಣ ಇಶಾನ್ವನ್ನಲ್ಲಿರುವ ಶ್ರೀರಾಮ ಮತ್ತು ಹನುಮಾನ್ ಪ್ರತಿಮೆಗಳನ್ನು ಸಮಾಜ ವಿರೋಧಿಗಳು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ವಿವಿಧ ಸಾಮಾಜಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಸಾಮಾಜಿಕ ಸಂಘಟನೆಗಳು ವೀಡಿಯೊದ ಆಧಾರದ ಮೇಲೆ ಸಮಾಜ ವಿರೋಧಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇವರಲ್ಲಿ ಓರ್ವ ಅಪ್ರಾಪ್ತ ವಯಸ್ಕಿನವ. ಕೊಂಡಗಾಂವ್ ಜಿಲ್ಲೆಯ ಅಲೋರ್ ನಿವಾಸಿಗಳಾದ ಮಹೇಶ್ ಕೊರ್ರಂ, ಶಿವಲಾಲ್ ಲೋಚನ್, ಸಂಜೀವ್ ಮಾರ್ಕಮ್ ಎಂದು ಆರೋಪಿಗಳನ್ನು ಗುರುತಿಸಲಾಗಿದೆ’’ ಎಂಬ ಮಾಹಿತಿ ಇದರಲ್ಲಿದೆ.