Kannada

Fact Check: ಬಾಂಗ್ಲಾ-ಮುರ್ಷಿದಾಬಾದ್ ಗಡಿಯಲ್ಲಿ ದೊಡ್ಡ ಸಂಖ್ಯೆಯ ಬಾಂಗ್ಲಾದೇಶಿಗಳು ಭಾರತವನ್ನು ಪ್ರವೇಶಿಸಿದ್ದಾರೆ? ಇಲ್ಲ, ಇದು ಹಳೆಯ ವೀಡಿಯೊ

ವೀಡಿಯೊದಲ್ಲಿ ಮುಸ್ಲಿಮರ ಗುಂಪೊಂದು ಕಾಣಿಸಿಕೊಂಡಿದ್ದು, ಅವರೆಲ್ಲರೂ ಕೈಯಲ್ಲಿ ಕೋಲುಗಳನ್ನು ಹಿಡಿದುಕೊಂಡಿದ್ದಾರೆ. ಈ ವೀಡಿಯೊವನ್ನು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಬಾಂಗ್ಲಾದೇಶ-ಮುರ್ಷಿದಾಬಾದ್ ಗಡಿಯಲ್ಲಿ ದೊಡ್ಡ ಸಂಖ್ಯೆಯ ಬಾಂಗ್ಲಾದೇಶಿಗಳು ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

Vinay Bhat

ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಮುಸ್ಲಿಮರ ಗುಂಪೊಂದು ಕಾಣಿಸಿಕೊಂಡಿದ್ದು, ಅವರೆಲ್ಲರೂ ಕೈಯಲ್ಲಿ ಕೋಲುಗಳನ್ನು ಹಿಡಿದುಕೊಂಡಿದ್ದಾರೆ. ಈ ವೀಡಿಯೊವನ್ನು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಬಾಂಗ್ಲಾದೇಶ-ಮುರ್ಷಿದಾಬಾದ್ ಗಡಿಯಲ್ಲಿ ದೊಡ್ಡ ಸಂಖ್ಯೆಯ ಬಾಂಗ್ಲಾದೇಶಿಗಳು ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಏಪ್ರಿಲ್ 14, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶ - ಮುರ್ಷಿದಾಬಾದ್ ಗಡಿ. ದೊಡ್ಡ ಸಂಖ್ಯೆಯ ಬಾಂಗ್ಲಾದೇಶಿಗಳು ಭಾರತವನ್ನು ಪ್ರವೇಶಿಸಿದ್ದಾರಂತೆ? ದೊಡ್ಡದನ್ನು ಯೋಜಿಸಲಾಗುತ್ತಿಯಂತೆ??. ಹಿಂದೂಗಳಿಗಾಗಿ ಮಾಡು ಇಲ್ಲವೇ ಮಡಿ ಸಮಯ, ತಡವಾಗುವ ಮುನ್ನ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು.’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬಾಂಗ್ಲಾದೇಶದಲ್ಲಿ ಕಳೆದ ನಮವೆಂಬರ್​ನಲ್ಲಿ ಇಸ್ಲಾಮಿಕ್ ದೇಗುಲವೊಂದರಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಎರಡು ಮುಸ್ಲಿಂ ಗುಂಪುಗಳ ನಡುವೆ ನಡೆದ ಗಲಾಟೆಯ ವೀಡಿಯೊ ಇದಾಗಿದೆ.

ವೈರಲ್ ವೀಡಿಯೊದ ಹಿಂದಿನ ಸತ್ಯವನ್ನು ಕಂಡುಹಿಡಿಯಲು, ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಸಂಪೂರ್ಣ ವೀಡಿಯೊವನ್ನು ಬಾಂಗ್ಲಾದೇಶದ ಸ್ಥಳೀಯ ಸುದ್ದಿ ಮಾಧ್ಯಮ ಬಾಂಗ್ಲಾ ಅಫೇರ್ಸ್ ನವೆಂಬರ್ 28, 2024 ರಂದು ತನ್ನ ಯೂಟ್ಯೂಬ್‌ ಚಾನೆಲ್‌ ನಲ್ಲಿ ಹಂಚಿಕೊಂಡಿರುವುದು ಸಿಕ್ಕಿದೆ. ಈ ವೀಡಿಯೊದ ಒಂದು ಭಾಗವು ಪ್ರಸ್ತುತ ವೈರಲ್ ಆಗಿದೆ. ಇದಕ್ಕೆ ‘‘ಶೇರ್ಪುರದಲ್ಲಿ ಶ್ರದ್ಧಾಕೇಂದ್ರಗಳ ಮೇಲೆ ದಾಳಿ, ಲೂಟಿ ಮತ್ತು ಬೆಂಕಿ ಹಚ್ಚಿರುವುದು’’ ಎಂಬ ಶೀರ್ಷಿಕೆ ನೀಡಿದೆ.

ಈ ವೀಡಿಯೊದ 0:50 ಸೆಕಂಡ್​ನ ಕ್ಲಿಪ್​ನಲ್ಲಿ ವೈರಲ್ ವೀಡಿಯೊವನ್ನು ಹೋಲುವ ದೃಶ್ಯಾವಳಿಗಳನ್ನು ನಾವು ಕಂಡಿದ್ದೇವೆ.

ಹಾಗೆಯೆ ಬಾಂಗ್ಲಾದೇಶ ಮತ್ತೊಂದು ಸುದ್ದಿ ಮಾಧ್ಯಮ ಜಮುನ ಟಿವಿ ಕೂಡ ತನ್ನ ಯೂಟ್ಯೂಬ್‌ ಚಾನೆಲ್​ನಲ್ಲಿ ನವೆಂಬರ್ 28, 2024ರಂದು ‘‘ಶೇರ್ಪುರ್ ದರ್ಬಾರ್ ಷರೀಫ್ ಧ್ವಂಸ ಮತ್ತು ಲೂಟಿ’’ ಎಂದ ಶೀರ್ಷಿಕೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಈ ವೀಡಿಯೊದ 1 ನಿಮಿಷ 8 ಸೆಕಂಡ್​ನ ಕ್ಲಿಪ್​ನಲ್ಲಿ ವೈರಲ್ ವೀಡಿಯೊವನ್ನು ಹೋಲುವ ದೃಶ್ಯಾವಳಿಗಳಿವೆ.

ಈ ವೀಡಿಯೊದ ವಿವರಣೆಯಲ್ಲಿ, ‘‘ಶೇರ್ಪುರ್ ಸದರ್‌ನಲ್ಲಿರುವ ದೋಜಾ ಪೀರ್‌ನ ದರ್ಬಾರ್‌ನಲ್ಲಿ ದಾಳಿ, ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ ಮುರ್ಷಿದ್‌ಪುರ ಗ್ರಾಮಸ್ಥರು ಸ್ಥಳೀಯ ಕ್ವಾಮಿ ಮದರಸಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜತೆಗೂಡಿ ದರ್ಬಾರ್ ಷರೀಫ್ ಮುಚ್ಚುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಗ್ರಾಮಸ್ಥರು ಪೀರನ ಹಿಂಬಾಲಕರೊಂದಿಗೆ ವಾಗ್ವಾದ ನಡೆಸಿದ್ದಾರೆ’’ ಎಂಬ ಮಾಹಿತಿ ಇದೆ.

ಈ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ಗಳನ್ನು ನಡೆಸಿದ್ದು ಈ ಘಟನೆಯ ಕುರಿತ ವರದಿಗಳನ್ನು ನೋಡಿದ್ದೇವೆ. ನವೆಂಬರ್ 28, 2024ರ ದಿ ಡೈಲಿ ಸ್ಟಾರ್ ಇದೇ ವೈರಲ್ ವೀಡಿಯೊಕ್ಕೆ ಹೋಲುವ ಫೋಟೋವನ್ನು ಹಂಚಿಕೊಂಡು ವರದಿ ಮಾಡಿದೆ. ‘‘ಶೇರ್ಪುರ್ ಸದರ್ ಉಪಜಿಲ್ಲೆಯಲ್ಲಿರುವ ಮುರ್ಷಿದ್‌ಪುರ್ ದರ್ಬಾರ್ ಷರೀಫ್ ಎಂದೂ ಕರೆಯಲ್ಪಡುವ ದೋಜಾ ಪಿರೇರ್ ದರ್ಬಾರ್ ಮೇಲೆ ನೂರಕ್ಕೂ ಹೆಚ್ಚು ಜನರ ಗುಂಪೊಂದು ನಿನ್ನೆ ಮತ್ತೊಮ್ಮೆ ದಾಳಿ ಮಾಡಿದೆ. ಇದು ಮೂರು ದಿನಗಳಲ್ಲಿ ಶ್ರದ್ಧಾಕೇಂದ್ರದ ಮೇಲೆ ಎರಡನೇ ದಾಳಿಯಾಗಿದೆ. ಮಂಗಳವಾರ, ಶ್ರದ್ಧಾಕೇಂದ್ರದ ಮೇಲೆ ನಡೆದ ದಾಳಿಯ ನಂತರ ಘರ್ಷಣೆ ಸಂಭವಿಸಿತು, ಇದರ ಪರಿಣಾಮವಾಗಿ ಒಬ್ಬರು ಸಾವನ್ನಪ್ಪಿದರು. ನಿನ್ನೆಯ ದಾಳಿಯು ಸುಮಾರು ಮೂರು ಗಂಟೆಗಳ ಕಾಲ ಮುಂದುವರೆಯಿತು, ಈ ಸಮಯದಲ್ಲಿ ಜನಸಮೂಹವು ಶ್ರದ್ಧಾಕೇಂದ್ರದ ಲೂಟಿ ಮಾಡಿ ಸುಟ್ಟುಹಾಕಿತು’’ ಎಂದಿದೆ.

ಢಾಕಾ ಟ್ರಿಬ್ಯೂನ್ 26 ನವೆಂಬರ್ 2024 ರಂದು, ‘‘ಶೇರ್ಪುರದ ಲಚ್ಮನ್‌ಪುರ ಪ್ರದೇಶದಲ್ಲಿ ಖ್ವಾಜಾ ಬದ್ರುದ್ದೀನ್ ಹೈದರ್ ನೇತೃತ್ವದ ಮುರ್ಷಿದ್‌ಪುರ್ ದರ್ಬಾರ್ ಷರೀಫ್ ಮೇಲೆ ನಡೆದ ವಿಧ್ವಂಸಕ ಮತ್ತು ಲೂಟಿಗೆ ಸಂಬಂಧಿಸಿದಂತೆ ಪೊಲೀಸರು ಏಳು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ದರ್ಬಾರ್ ನಲ್ಲಿ ಇಸ್ಲಾಂ ವಿರೋಧಿ ಚಟುವಟಿಕೆಗಳು ನಡೆದಿವೆ. ಸ್ಥಳೀಯ ಮದ್ರಸಾ ಶಿಕ್ಷಕರು ಮತ್ತು ನಿವಾಸಿಗಳ ಆರೋಪದ ನಂತರ ಈ ದಾಳಿ ನಡೆದಿದೆ. ಸುಮಾರು 400-500 ಜನರು ಸೈಟ್‌ಗೆ ನುಗ್ಗಿದ್ದು, ಬೇಲಿಗಳನ್ನು ಮುರಿದು ಆಸ್ತಿಯನ್ನು ಹಾನಿಗೊಳಿಸಿದ್ದಾರೆ’’ ಎಂದು ವರದಿ ಮಾಡಿದೆ.

ಹೀಗಾಗಿ ಬಾಂಗ್ಲಾದೇಶ-ಮುರ್ಷಿದಾಬಾದ್ ಗಡಿಯಲ್ಲಿ ದೊಡ್ಡ ಸಂಖ್ಯೆಯ ಬಾಂಗ್ಲಾದೇಶಿಗಳು ಭಾರತವನ್ನು ಪ್ರವೇಶಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ಘಟನೆ ಬಾಂಗ್ಲಾದೇಶದ್ದಾಗಿದ್ದು, 5 ತಿಂಗಳ ಹಿಂದೆ ಬಾಂಗ್ಲಾದೇಶದ ಶೇರ್ಪುರದಲ್ಲಿ ಮುಸ್ಲಿಂ ಸಮುದಾಯದೊಳಗಿನ ಎರಡು ಗುಂಪುಗಳ ನಡುವಿನ ಗಲಾಟೆಯ ವೀಡಿಯೊ ಆಗಿದೆ.

Fact Check: West Bengal polls–BJP changes EVMs after voting? No, here are the facts

Fact Check: ജബല്‍പൂരിലെ ബോട്ടപകടത്തില്‍ മരണപ്പെട്ട അമ്മയും കുഞ്ഞും? പ്രചരിക്കുന്ന ചിത്രത്തിന്റെ സത്യമറിയാം

Fact Check: விகடன் அட்டைப்படத்தில் தவெக தலைவர் விஜய்? வைரலாகும் படத்தின் பின்னணி என்ன

Fact Check: ‘Hindutva mob’ assaults Christian in front of wife? No, attack has no communal angle

Fact Check: ಜಬಲ್ಪುರ ಕ್ರೂಸ್ ಹಡಗು ಮುಳುಗಿದ ನಂತರದ ದೃಶ್ಯ ಎಂದು ಬಾಂಗ್ಲಾದೇಶದ ವೀಡಿಯೊ ವೈರಲ್