ಬಕ್ರೀದ್ ಹಬ್ಬದ ಮುನ್ನ ಪಶ್ಚಿಮ ಬಂಗಾಳದ ಹೊಸ ಬಿಜೆಪಿ ಸರ್ಕಾರವು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಪ್ರಾಣಿ ವಧೆ ನಿಯಮಗಳನ್ನು ತಡೆಹಿಡಿಯಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ. ರಾಜ್ಯ ಸರ್ಕಾರ ಇತ್ತೀಚೆಗೆ 1950 ರ ಪ್ರಾಣಿ ವಧೆ ನಿಯಂತ್ರಣ ಕಾಯ್ದೆಯಡಿ ಅಧಿಸೂಚನೆಯನ್ನು ಹೊರಡಿಸಿದ್ದು, ಬಲಿ ನೀಡುವ ಮೊದಲು ದನಗಳ ವಯಸ್ಸು ಮತ್ತು ದೈಹಿಕ ಸ್ಥಿತಿಯ ಪಶುವೈದ್ಯಕೀಯ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಿದೆ.
ಈ ಸಂದರ್ಭದಲ್ಲಿ, ಇಬ್ಬರು ಮುಸ್ಲಿಂ ಪುರುಷರನ್ನು ಕಟ್ಟಿಹಾಕಿ ಬೆದರಿಕೆ ಹಾಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಪುರುಷರು ಹಸುವನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು, ಆದರೆ ಅಲ್ಲಿದ್ದ ಸಾರ್ವಜನಿಕರು ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದಲ್ಲಿ ಒಂದು ವಾರದೊಳಗೆ ನಂಬಲಾಗದ ಬದಲಾವಣೆ. ಇಬ್ಬರು ಶಾಂತಿಪ್ರಿಯರು ಖುರ್ಬಾನಿಗೆ ಹಸುವನ್ನು ಮಾರಾಟ ಮಾಡಲು ಬಂದರು. ಹೊಸ ಕಾನೂನಿನ ಪ್ರಕಾರ ಅವರ ಬಳಿ ಅಗತ್ಯವಾದ ದಾಖಲೆಗಳಿಲ್ಲದ ಕಾರಣ ಸ್ಥಳೀಯರು ಅವರನ್ನು ಹಿಡಿದರು. ಮಮತಾ ಅವರಿಗೆ ಎಲ್ಲವನ್ನೂ ಉಚಿತವಾಗಿ ಮತ್ತು ಆದ್ಯತೆಯ ಮೇರೆಗೆ ನೀಡುತ್ತಿದ್ದ ದಿನಗಳು ಹೋಗಿವೆ.’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಜುಲೈ 2025 ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿನದ್ದು ಎಂದು ತಿಳಿದುಬಂದಿದೆ.
ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಕೀಫ್ರೇಮ್ಗಳನ್ನು ಗೂಗಲ್ ಲೆನ್ಸ್ನಲ್ಲಿ ಹುಡುಕಿದಾಗ, ಪಶ್ಚಿಮ ಬುರ್ದ್ವಾನ್ ತೃಣಮೂಲ ಕಾಂಗ್ರೆಸ್ ನಾಯಕ ನರೇಂದ್ರನಾಥ್ ಚಕ್ರವರ್ತಿ ಅವರ ಆಗಸ್ಟ್ 1, 2025 ರ ಫೇಸ್ಬುಕ್ ಪೋಸ್ಟ್ ನಮಗೆ ಸಿಕ್ಕಿತು. ಈ ಪೋಸ್ಟ್ ವೈರಲ್ ಕ್ಲಿಪ್ಗೆ ಹೋಲುವ ಚಿತ್ರಗಳನ್ನು ಒಳಗೊಂಡಿದೆ. ಈ ಘಟನೆ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಸಂಭವಿಸಿದೆ.
ಜುಲೈ 31, 2025 ರಂದು ಬಿಜೆಪಿ ನಾಯಕಿ ಪಾರಿಜತ್ ಗಂಗೂಲಿ ದುರ್ಗಾಪುರದ ಕೆಲವು ಸ್ಥಳೀಯ ನಿವಾಸಿಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಪೋಸ್ಟ್ನಲ್ಲಿ ಹೇಳಲಾಗಿತ್ತು. ಚಕ್ರವರ್ತಿ ಗಂಗೂಲಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ನಾವು ಕೀವರ್ಡ್ ಹುಡುಕಾಟ ನಡೆಸಿದಾಗ ಆಗಸ್ಟ್ 2025 ರಲ್ಲಿ ದಿ ಹಿಂದೂ ಮತ್ತು ಇಂಡಿಯಾ ಟುಡೇ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು ಕಂಡುಬಂದವು. ಈ ವರದಿಗಳ ಪ್ರಕಾರ, ಗೋಸಂರಕ್ಷಣಾ ಗುಂಪಿನ ನಾಯಕಿ ಪಾರಿಜತ್ ಗಂಗೂಲಿ ಕೆಲವು ಮುಸ್ಲಿಂ ಪುರುಷರನ್ನು ಕಟ್ಟಿಹಾಕಿ ಹಲ್ಲೆ ಮಾಡಿ, ಅವರ ಕಿವಿಗಳನ್ನು ಹಿಡಿದುಕೊಂಡು ಧರಣಿ ನಡೆಸುವಂತೆ ಒತ್ತಾಯಿಸಿದರು. ಟಿಎಂಸಿ ನಾಯಕ ನರೇಂದ್ರನಾಥ್ ಚಕ್ರವರ್ತಿ ಕೋಕ್ ಓವನ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆಗಸ್ಟ್ 1, 2025 ರಂದು, ಪಶ್ಚಿಮ ಬಂಗಾಳ ಪೊಲೀಸರು ಎಕ್ಸ್ನಲ್ಲಿ ಈ ಘಟನೆಯ ಕುರಿತು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕೃಷಿಗಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಜನರನ್ನು ದುರ್ಗಾಪುರದಲ್ಲಿ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಗಳು ತಡೆದು ತೀವ್ರವಾಗಿ ಥಳಿಸಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ಪೊಲೀಸರು ದೂರು ದಾಖಲಿಸಿದ್ದಾರೆ ಮತ್ತು ಇಬ್ಬರನ್ನು ಬಂಧಿಸಿದ್ದಾರೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಆಗಸ್ಟ್ 12, 2025 ರ ಟೆಲಿಗ್ರಾಫ್ ವರದಿಯ ಪ್ರಕಾರ, ಆರೋಪಿ ಪಾರಿಜತ್ ಗಂಗೂಲಿಯನ್ನು ಜಾರ್ಖಂಡ್ನ ಧನ್ಬಾದ್ನಲ್ಲಿ ಬಂಧಿಸಲಾಯಿತು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮುಸ್ಲಿಮರು ಹಸುವನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಅಲ್ಲಿದ್ದ ಸಾರ್ವಜನಿಕರು ಅವರನ್ನು ಬಂಧಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ನಾವು ತೀರ್ಮಾನಿಸುತ್ತೇವೆ.