ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದೆ, ಅದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಇನ್ನುಂದೆ ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಲಾಗುವುದು ಅಥವಾ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗುವುದು ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ದ್ರೌಪದಿ ಮುರ್ಮು ಅವರ ಫೋಟೋ ಜೊತೆಗೆ ಈ ಪೋಸ್ಟ್ ಹಂಚಿಕೊಂಡಿದ್ದು, ‘‘ಮುಗ್ಧ ಹುಡುಗಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು. ಅತ್ಯಾಚಾರಿಗಳಿಗೆ ಇನ್ಮುಂದೆ ಯಾವುದೇ ವಿಚಾರಣೆ ಇರುವುದಿಲ್ಲ ಎಂದು ಅವರು ಹೇಳಿದರು. ಈ ಅಪರಾಧಿಗಳಿಗೆ ಇನ್ಮೇಲೆ ಒಂದೇ ಒಂದು ಕಾನೂನು ಅದೇ ಡೈರೆಕ್ಟ್ ಎನ್ಕೌಂಟರ್ ಅಥವಾ ಪಟ್ಟಣದ ಚೌಕದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸುವುದು. ದ್ರೌಪದಿಯ ನಿರ್ಧಾರವನ್ನು ಯಾರು ಒಪ್ಪುತ್ತೀರಾ? ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಿಮಗೆ ಅನಿಸಿದರೆ! ದಯವಿಟ್ಟು ನಮಗೆ ತಿಳಿಸಿ.’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಸುದ್ದಿ ಎಂಬುದು ತಿಳಿದುಬಂದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ಆದ ಹೇಳಿಕೆಯ ಕುರಿತು ಗೂಗಲ್ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ, ಯಾವುದೇ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆ ಅಥವಾ ಅಧಿಕೃತ ಮೂಲದಲ್ಲಿ ಅಂತಹ ಹೇಳಿಕೆಗೆ ಸಂಬಂಧಿಸಿದ ಯಾವುದೇ ಸುದ್ದಿ ಕಂಡುಬಂದಿಲ್ಲ. ದ್ರೌಪದಿ ಮುರ್ಮು ಅವರು ನಿಜಕ್ಕೂ ಈರೀತಿಯ ಕಾನೂನು ತಂದಿದ್ದರೆ ಅಥವಾ ಹೇಳಿಕೆ ನೀಡಿದ್ದರೆ ಇದು ಕೇವಲ ರಾಷ್ಟ್ರೀಯ ಅಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಆದರೆ, ಈ ಕುರಿತು ಯಾವುದೇ ಸುದ್ದಿ ಕಂಡುಬಂದಿಲ್ಲ.
ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 28 ರಂದು ಪ್ರಾರಂಭವಾಯಿತು ಮತ್ತು ಈ ಅವಧಿಯಲ್ಲಿ ರಾಷ್ಟ್ರಪತಿಗಳು ಸಂಸತ್ತಿಗೆ ತಮ್ಮ ಭಾಷಣ ಮಾಡಿದರು ಎಂಬುದು ಗಮನಾರ್ಹ. ನಾವು ಭಾರತದ ರಾಷ್ಟ್ರಪತಿಗಳ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುವ ರಾಷ್ಟ್ರಪತಿಗಳ ಭಾಷಣವನ್ನು ಪರಿಶೀಲಿಸಿದ್ದೇವೆ, ಆದರೆ ಅಲ್ಲಿ ಅಂತಹ ಯಾವುದೇ ಹೇಳಿಕೆ ಇದರಲ್ಲಿಲ್ಲ.
ನಾವು ರಾಷ್ಟ್ರಪತಿಯವರ, ಪ್ರಧಾನಿ ಅವರ ಸಾಮಾಜಿಕ ಖಾತೆಯನ್ನು ಕೂಡ ಪರಿಶೀಲಿಸಿದ್ದೇವೆ. ಇದರಲ್ಲೂ ವೈರಲ್ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಕಂಡುಬಂದಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ದ್ರೌಪದಿ ಮುರ್ಮು ಅವರು ಅತ್ಯಾಚಾರ ಅಪರಾಧಿಗಳನ್ನು ಎನ್ಕೌಂಟರ್ಗಳಲ್ಲಿ ಕೊಲ್ಲುವ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಲ್ಲಿಗೇರಿಸುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳುತ್ತೇವೆ. ವೈರಲ್ ಹೇಳಿಕೆ ಸುಳ್ಳು.