ಚೆನ್ನೈನಲ್ಲಿ ಅಶೋಕ್ ಚಕ್ರ ಪ್ರಶಸ್ತಿ ಪುರಸ್ಕೃತ ವೀರ ಯೋಧ ಮೇಜರ್ ಮುಕುಂದ್ ವರದರಾಜನ್ ಅವರ ಗೌರವಾರ್ಥ ಪ್ರಮುಖ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಸುಮಾರು 16 ಕಿಲೋಮೀಟರ್ ಉದ್ದದ ವೆಳಚೇರಿ–ತಾಂಬರಂ ಹೈರೋಡ್ಗೆ ಮೇಜರ್ ಮುಕುಂದ್ ವರದರಾಜನ್ ಅವರ ಹೆಸರನ್ನು ಇಡಲಾಗುತ್ತಿದೆ. ಇದು ತಮಿಳುನಾಡಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಟಿವಿಕೆ ಪಕ್ಷದ ವಿಜಯ್ ಜೋಸೆಫ್ ಅವರ ಕಾರ್ಯ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೊಗಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಮೇಜತ್ ಮುಕುಂದ್ ಹಾಗೂ ಸಿಎಂ ವಿಜಯ್ ಅವರ ಫೋಟೋ ಹಂಚಿಕೊಂಡು, ‘‘ಧನ್ಯವಾದಗಳು ವಿಜಯ ಜೋಸೆಫ್ ಇದು ನಿಜವಾದ ನಾಯಕನ ಕೆಲಸ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧ ಮೇಜರ್ ಮುಕುಂದ್ ವರದರಾಜನ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಸಿಎಂ ವಿಜಯ ಅವರು 16 ಕಿ.ಮೀ ಉದ್ದದ ತಾಂಬರಂ-ವೆಳಚ್ಚೇರಿ ಮುಖ್ಯರಸ್ತೆಗೆ ಅಧಿಕೃತವಾಗಿ ಮೇಜರ್ ಮುಕುಂದ್ ವರದರಾಜನ್ ರಸ್ತೆ ಎಂದು ಹೆಸರಿಟ್ಟಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಇದು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ರಸ್ತೆಗೇ ಮೇಜರ್ ಮುಕುಂದ್ ವರದರಾಜನ್ ಅವರ ಹೆಸರನ್ನು ಇಡುವ ನಿರ್ಧಾರ ನಿಜವಾಗಿದ್ದರೂ, ಈ ಉಪಕ್ರಮವು ಇತ್ತೀಚೆಗೆ ಆರಂಭವಾದದ್ದಲ್ಲ. ಅಲ್ಲದೆ, ಇದು ಟಿವಿಕೆ ಆಡಳಿತವು ಹೊಸದಾಗಿ ಕೈಗೊಂಡ ಕ್ರಮವೂ ಅಲ್ಲ. ಈ ಪ್ರಕ್ರಿಯೆ 2025ರಲ್ಲಿ ಆರಂಭವಾಗಿದ್ದು, ಅದನ್ನು ಇತ್ತೀಚಿನ ರಾಜಕೀಯ ಬೆಳವಣಿಗೆಯಂತೆ ಪ್ರಸ್ತುತಪಡಿಸಲಾಗುತ್ತಿದೆ.
ನಿಜಾಂಶವನ್ನು ತಿಳಿಯಲು ನಾವು ಕೀವರ್ಡ್ ಸರ್ಚ್ ನಡೆಸಿದಾಗ, ಜೂನ್ 12 ರಂದು ಪ್ರಕಟಿಸಿದ ಎನ್ಡಿಟಿವಿ ವರದಿ ಸಿಕ್ಕಿತು. ಇದರಲ್ಲಿರುವ ಮಾಹಿತಿಯ ಪ್ರಕಾರ, ಚೆನ್ನೈನ ತಾಂಬರಂ-ವೆಳಚೇರಿ ನಡುವಿನ ಸುಮಾರು 15 ಕಿಲೋಮೀಟರ್ ಉದ್ದದ ಪ್ರಮುಖ ರಸ್ತೆಗೆ ಅಶೋಕ್ ಚಕ್ರ ಪ್ರಶಸ್ತಿ ಪುರಸ್ಕೃತ ವೀರ ಯೋಧ Major Mukund Varadharajan ಅವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ತಾಂಬರಂ ನಗರ ಮಹಾನಗರ ಪಾಲಿಕೆ ಮಂಡಳಿ ಅಧಿಕೃತವಾಗಿ ನಿರ್ಣಯ ಅಂಗೀಕರಿಸಿದೆ. ಈ ನಾಮಕರಣ ಪ್ರಕ್ರಿಯೆ ಹೊಸದಾಗಿ ಆರಂಭವಾಗಿಲ್ಲ. 2025ರ ಆಗಸ್ಟ್ನಲ್ಲೇ ನಗರಾಡಳಿತ ನಿರ್ದೇಶಕರು ರಸ್ತೆ ಹೆಸರನ್ನು ಬದಲಾಯಿಸುವ ಪ್ರಸ್ತಾವನೆ ಸಲ್ಲಿಸಿದ್ದರು. ಆರಂಭಿಕ ಮನವಿಯ ನಂತರ, 2025ರ ಅಕ್ಟೋಬರ್ 23ರಂದು ತಮಿಳುನಾಡು ಸರ್ಕಾರ ಅಧಿಕೃತ ಅನುಮತಿ ಪತ್ರವನ್ನು ಹೊರಡಿಸಿತು. ಈ ಪತ್ರದ ಮೂಲಕ ರಸ್ತೆ ನಾಮಕರಣಕ್ಕೆ ಸಂಬಂಧಿಸಿದ ನಿರ್ಣಯವನ್ನು ಮುಂದುವರಿಸಲು ಸರ್ಕಾರವು ಅಧಿಕೃತ ಅನುಮೋದನೆ ನೀಡಿದ್ದು, ಹೆಸರಿಡುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿಸಿತು.
ತಮಿಳುನಾಡಿದ ಮತ್ತೊಂದು ಮಾಧ್ಯಮ Daily Thanthi ಜೂನ್ 12 ರಂದು ಪ್ರಕಟಿಸಿದ ವರದಿಯಲ್ಲಿ, ಸೇನಾ ಸೇವೆಯಲ್ಲಿ ವೀರ ಮರಣ ಹೊಂದಿದ ಮೇಜರ್ ಮುಕುಂದ್ ವರದರಾಜನ್ ಅವರ ಗೌರವಾರ್ಥವಾಗಿ, ತಾಂಬರಂ ರೈಲು ನಿಲ್ದಾಣದಿಂದ ವೇಲಾಚೇರಿಯವರೆಗಿನ ರಸ್ತೆಗೆ ಅವರ ಹೆಸರಿಡಲು ನಿರ್ಣಯ ಅಂಗೀಕರಿಸಲಾಗಿದೆ. ಕಳೆದ ವರ್ಷ ನಿಗಮಕ್ಕೆ ಕಳುಹಿಸಲಾದ ಮನವಿಯ ಮೇರೆಗೆ, ತಾಂಬರಂ ನಗರಸಭೆಯ ಸಭೆಯಲ್ಲಿ ಹೆಸರು ಬದಲಾಯಿಸುವ ನಿರ್ಣಯವನ್ನು ತರಲಾಯಿತು. ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಇದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಹೇಳಲಾಗಿದೆ.
ಈಟಿವಿ ಭಾರತ್ ಜೂನ್ 12 ರಂದು ಸುದೀರ್ಘ ವರದಿ ಪ್ರಕಟಿಸಿರುವುದು ನಮಗೆ ಸಿಕ್ಕಿದೆ. ಮೇಜರ್ ಮುಕುಂದ್ ವರದರಾಜನ್ ಅವರ ಕುಟುಂಬವು ತಾಂಬರಂ ಕಾರ್ಪೊರೇಷನ್ ವ್ಯಾಪ್ತಿಯ ಪೂರ್ವ ತಾಂಬರಂ ಪ್ರದೇಶದಲ್ಲಿ ವಾಸಿಸುತ್ತಿದೆ. ಈ ಪರಿಸ್ಥಿತಿಯಲ್ಲಿ, ಅವರ ವೀರ ತ್ಯಾಗದ ಸ್ಮರಣಾರ್ಥ ತಾಂಬರಂ ರೈಲು ನಿಲ್ದಾಣದಿಂದ ವೇಲಾಚೇರಿಗೆ ಹೋಗುವ ಮುಖ್ಯ ರಸ್ತೆಗೆ ಮೇಜರ್ ಮುಕುಂದ್ ವರದರಾಜನ್ ರಸ್ತೆ ಎಂದು ಹೆಸರಿಸಲು ಕ್ರಮ ಕೈಗೊಳ್ಳುವಂತೆ ಪುರಸಭೆಯ ಆಡಳಿತ ನಿರ್ದೇಶಕರು ಕಳೆದ ವರ್ಷ ಆಗಸ್ಟ್ 26 ರಂದು ಪತ್ರವನ್ನು ಕಳುಹಿಸಿದ್ದರು. ಇದರ ನಂತರ, ತಾಂಬರಂ-ವೇಲಾಚೇರಿ ಮುಖ್ಯ ರಸ್ತೆಯನ್ನು ಮೇಜರ್ ಮುಕುಂದ್ ವರದರಾಜನ್ ರಸ್ತೆ ಎಂದು ಹೆಸರಿಸುವ ನಿರ್ಣಯವನ್ನು ನಿನ್ನೆ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಮೇಜರ್ ಮುಕುಂದ್ ಅವರ ತಂದೆ ವರದರಾಜನ್ ಅವರ ಮಾತನ್ನೂ ಈಟಿವಿ ಭಾರತ್ ಸೇರಿಸಿದ್ದು, "ವಾಸ್ತವವಾಗಿ, ಈ ರಸ್ತೆಗೆ ಮೇಜರ್ ಮುಕುಂದ್ ಹೆಸರಿಡುವ ಪ್ರಯತ್ನಗಳು 2014 ರಲ್ಲಿಯೇ ಪ್ರಾರಂಭವಾದವು. ಇದಕ್ಕಾಗಿ ಕೆಲಸ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಅದನ್ನು ಮುಂದೂಡಲಾಯಿತು. ಈಗ, ದೀರ್ಘ ಅಂತರದ ನಂತರ, ಈ ನಿರ್ಣಯವನ್ನು ಅಂಗೀಕರಿಸಲಾಗಿದೆ ಮತ್ತು ಕೆಲಸ ನಡೆಯುತ್ತಿದೆ, ಇದು ತುಂಬಾ ಸ್ವಾಗತಾರ್ಹ ಮತ್ತು ಸಂತೋಷಕರವಾಗಿದೆ" ಎಂದು ಹೇಳಿದರು ಎಂದು ಬರೆಯಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಟಿವಿಕೆ ಆಡಳಿತವು ತಾಂಬರಂ-ವೆಳಚ್ಚೇರಿ ಮುಖ್ಯರಸ್ತೆಗೆ ‘‘ಮೇಜರ್ ಮುಕುಂದ್ ವರದರಾಜನ್ ರಸ್ತೆ’’ ಎಂದು ಹೆಸರಿಟ್ಟಿದ್ದು ಎಂಬುದು ಸುಳ್ಳು. ಅಧಿಕೃತ ಪ್ರಸ್ತಾವನೆಗಳು ಮತ್ತು ರಾಜ್ಯ ಸರ್ಕಾರದ ಅನುಮತಿಗಳನ್ನು 2025 ರ ಉತ್ತರಾರ್ಧದಲ್ಲಿ ಪ್ರಕ್ರಿಯೆಗೊಳಿಸಲಾಯಿತು ಮತ್ತು ಅನುಮೋದಿಸಲಾಯಿತು ಎಂಬುದು ನಮ್ಮ ಸಂಶೋದನೆಯಿಂದ ತಿಳಿದುಬಂದಿದೆ.