ಚುನಾವಣಾ ಆಯೋಗವು SIR ಘೋಷಣೆಯ ನಂತರ ಅಕ್ರಮ ಬಾಂಗ್ಲಾದೇಶಿಗಳು ಭಾರತವನ್ನು ತೊರೆಯುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದೀಗ ಅಂತಹದೆ ಒಂದು ವೀಡಿಯೊ ಹರಿದಾಡುತ್ತಿದ್ದು, ಇದರಲ್ಲಿ ಮುಳ್ಳುತಂತಿ ಬೇಲಿಯ ಉದ್ದಕ್ಕೂ ಸಾಲುಗಟ್ಟಿ ನಿಂತ ಜನರು ಮತ್ತು ಗೇಟ್ ಮೂಲಕ ನಿರ್ಗಮಿಸುವ ದೊಡ್ಡ ಗುಂಪನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿನ ಸಧ್ಯದ ಪರಸ್ಥಿತಿ. ಪುನೀತ್ ಕೆರೆಹಳ್ಳಿ ಅವರಿಗೆ ಕೆಟ್ಟದಾಗಿ ಮಾತನಾಡುವ ಜಿಹಾದಿ ಹಂದಿಗಳಿಗೆ ಈ ವಿಡಿಯೋ ಸಮರ್ಪಣೆ.’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ವಾಸ್ತವವಾಗಿ ಪಶ್ಚಿಮ ಬಂಗಾಳದ ಫೂಂಕೋಟ್ಲಾದಲ್ಲಿ ಅಕ್ಟೋಬರ್ 30 2025 ರಿಂದ ನಡೆದ ಶ್ಯಾಮ ಪೂಜೆಯ ನಿಮಜ್ಜನ ಮೆರವಣಿಗೆಯನ್ನು ತೋರಿಸುತ್ತದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ ಕಂಡುಬರುವ ಜನರು ಭಾರತದಿಂದ ಬಾಂಗ್ಲಾದೇಶಕ್ಕೆ ಪಲಾಯನ ಮಾಡುತ್ತಿರುವಂತೆ ಕಾಣುತ್ತಿಲ್ಲ. ಮೊದಲನೆಯದಾಗಿ, ಅವರಲ್ಲಿ ಯಾರೂ ತಮ್ಮ ತಮ್ಮ ವಸ್ತುಗಳನ್ನು ಹೊತ್ತೊಯ್ಯುತ್ತಿಲ್ಲ. ಎರಡನೆಯದಾಗಿ, ಜನಸಮೂಹವು ಸಂತೋಷ ಮತ್ತು ಉತ್ಸುಕರಾಗಿರುವಂತೆ ತೋರುತ್ತದೆ. ಮೂರನೆಯದಾಗಿ, ಗಡಿ ಬೇಲಿಯ ಮೇಲೆ ಗೇಟ್ ಅನ್ನು ನಿರ್ವಹಿಸುವ ಭದ್ರತಾ ಸಿಬ್ಬಂದಿಗಳು ಜನರನ್ನು ಮುಕ್ತವಾಗಿ ದಾಟಲು ಅನುಮತಿಸುವುದನ್ನು ಕಾಣಬಹುದು.
ಬಳಿಕ ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ, ನೇಹಾ ಮಂಡಲ್ ಎಂಬವರ ಫೇಸ್ಬುಕ್ ಪ್ರೊಫೈಲ್ನಲ್ಲಿ ಅಕ್ಟೋಬರ್ 30 2025 ರಂದು ಪೋಸ್ಟ್ ಮಾಡಲಾದ ಲೈವ್ ವೀಡಿಯೊ ಕಂಡುಬಂದಿದೆ. ಆ ವೀಡಿಯೊದ ಒಂದು ಭಾಗವು ವೈರಲ್ ವೀಡಿಯೊವನ್ನು ಹೋಲುತ್ತದೆ. (Archive)
"ಫೂನ್ಕೋಟ್ಲಾ ಶ್ಯಾಮಾ ಮಾ ವಿದಾಯ" ಎಂಬ ಶೀರ್ಷಿಕೆಯೊಂದಿಗೆ ಲೈವ್ ವೀಡಿಯೊವನ್ನು ಪೋಸ್ಟ್ ಮಾಡಿದ್ದರು, ಇದು ಭಾರತ-ಬಾಂಗ್ಲಾದೇಶ ಗಡಿಯ ಬಳಿಯ ಪಶ್ಚಿಮ ಬಂಗಾಳದ ಹಳ್ಳಿಯಾದ ಫೂನ್ಕೋಟ್ಲಾದಲ್ಲಿ ಶ್ಯಾಮಾ ಪೂಜೆ/ಕಾಳಿ ಪೂಜೆಯ ಮುಳುಗಿಸುವ ಮೆರವಣಿಗೆಯನ್ನು ಉಲ್ಲೇಖಿಸುತ್ತದೆ.
ಫೇಸ್ಬುಕ್ ಲೈವ್ ವೀಡಿಯೊವನ್ನು ವೈರಲ್ ಕ್ಲಿಪ್ನೊಂದಿಗೆ ಹೋಲಿಸಿದಾಗ, ಎರಡೂ ವೀಡಿಯೊಗಳಲ್ಲಿ ಒಂದೇ ಜನರು ಗೋಚರಿಸುತ್ತಿರುವುದು ಕಂಡುಬಂದಿದೆ.
ಮಾಹಿತಿಯ ಆಧಾರದ ಮೇಲೆ, ಭಾರತದ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಮುರುಟಿಯಾ ಪೊಲೀಸ್ ಠಾಣೆಯ ಶಿಕಾರ್ಪುರದಲ್ಲಿ ಫಂಕಲ್ಟಾ ಎಂಬ ಗ್ರಾಮವಿದ್ದು, ಅಲ್ಲಿನ ಶ್ರೀ ಶ್ರೀ ಶ್ಯಾಮಾ ಮಾ ದೇವಸ್ಥಾನದಲ್ಲಿ ಪ್ರತಿ ವರ್ಷ ಕಾಳಿ ಪೂಜೆಯನ್ನು ಆಯೋಜಿಸಲಾಗುತ್ತದೆ.
ಹುಡುಕಾಟದ ವೇಳೆ 2025 ರ ನವೆಂಬರ್ 25 ರಂದು ಎಕ್ಸ್ ಪೋಸ್ಟ್ನಲ್ಲಿ, ಪಶ್ಚಿಮ ಬಂಗಾಳ ಪೊಲೀಸರು ವೈರಲ್ ವೀಡಿಯೊವನ್ನು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಪೋಸ್ಟ್ ಹಂಚಿಕೊಂಡಿದೆ. ಇದು ವಾಸ್ತವವಾಗಿ ನಾಡಿಯಾ ಜಿಲ್ಲೆಯ ಫುಂಕೋಟಲಾ ಗ್ರಾಮದಲ್ಲಿ ಕಾಳಿ ವಿಗ್ರಹ ವಿಸರ್ಜನೆಯನ್ನು ತೋರಿಸುತ್ತದೆ, ರಾಜ್ಯವನ್ನು ತೊರೆಯುವ ಅಕ್ರಮ ವಲಸಿಗರಲ್ಲ ಎಂದು ಬರೆಯಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದಲ್ಲಿ ಕಾಳಿ ವಿಗ್ರಹ ವಿಸರ್ಜನೆಯ ವೀಡಿಯೊವನ್ನು ಭಾರತ-ಬಾಂಗ್ಲಾ ಗಡಿಯ ಸಧ್ಯದ ಪರಿಸ್ಥಿತಿ ಎಂದು ಅಕ್ರಮ ಬಾಂಗ್ಲಾದೇಶಿಗಳು ದೇಶ ಬಿಡುತ್ತಿರುವುದನ್ನು ತೋರಿಸುವಂತೆ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.