Kannada

Fact Check: ನವರಾತ್ರಿ ಮೆರವಣಿಗೆ ಸಂದರ್ಭ ಮಾಂಸದ ತುಂಡು ಎಸೆದ ಮುಸ್ಲಿಮರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್?, ಸತ್ಯ ಇಲ್ಲಿದೆ ನೋಡಿ

ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ನವರಾತ್ರಿ ಮೆರವಣಿಗೆ ಮೇಲೆ ಮುಸ್ಲಿಮರು ನಡೆಸಿದ ದಾಳಿ ಎಂದು ಹೇಳಲಾಗುವ ವೀಡಿಯೊವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಪೊಲೀಸರು ದೊಡ್ಡ ಗುಂಪಿನ ಮೇಲೆ ಲಾಠಿ ಚಾರ್ಜ್ ಮಾಡುತ್ತಿರುವುದನ್ನು ಕಾಣಬಹುದು.

Vinay Bhat

ದೇಶಾದ್ಯಂತ ನವರಾತ್ರಿ ಆಚರಣೆಗಳು ಅದ್ಧೂರಿಯಾಗಿ ನಡೆದಿವೆ. ಏತನ್ಮಧ್ಯೆ, ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ನವರಾತ್ರಿ ಮೆರವಣಿಗೆ ಮೇಲೆ ಮುಸ್ಲಿಮರು ನಡೆಸಿದ ದಾಳಿ ಎಂದು ಹೇಳಲಾಗುವ ವೀಡಿಯೊವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಪೊಲೀಸರು ದೊಡ್ಡ ಗುಂಪಿನ ಮೇಲೆ ಲಾಠಿ ಚಾರ್ಜ್ ಮಾಡುತ್ತಿರುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ಐ ಲವ್ ಎಂ ಹೆಸರಿನಲ್ಲಿ ಇಸ್ಲಾಮಿಸ್ಟ್‌ಗಳು ನವರಾತ್ರಿ ಮೆರವಣಿಗೆಯ ಮೇಲೆ ಮಾಂಸದ ತುಂಡುಗಳನ್ನು ಎಸೆದು, ಅಶಾಂತಿಯನ್ನು ಪ್ರಚೋದಿಸಲು ಪ್ರಯತ್ನಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮೂಲಕ ಮಧ್ಯಪ್ರವೇಶಿಸಬೇಕಾಯಿತು’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ಐ ಲವ್ ಮೊಹಮ್ಮದ್ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಯ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ವಿಡಿಯೋ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ನ್ಯೂಸ್ 18 ವೈರಲ್ ವೀಡಿಯೊದಲ್ಲಿನ ಸ್ಕ್ರೀನ್ ಶಾಟ್​ನೊಂದಿಗೆ ವರದಿ ಪ್ರಕಟಿಸಿರುವುದು ಕಂಡುಬಂತು. ಸೆಪ್ಟೆಂಬರ್ 29, 2025 ರಂದು ಹಂಚಿಕೊಂಡ ವರದಿಯಲ್ಲಿ, ಮಹಾರಾಷ್ಟ್ರದ ಅಹಲ್ಯಾ ನಗರ ಜಿಲ್ಲೆಯಲ್ಲಿ ಐ ಲವ್ ಮೊಹಮ್ಮದ್ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರತಿಭಟನೆಯ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 28 ರ ರಾತ್ರಿ, ಮಿಲಿವಾಡಾ ಪ್ರದೇಶದಲ್ಲಿ ಐ ಲವ್ ಮೊಹಮ್ಮದ್ ಎಂದು ಬರೆದ ರಂಗೋಲಿಗಳನ್ನು ಕೆಲವರು ಬಿಡಿಸಿದರು. ಈ ವೀಡಿಯೊ ವೈರಲ್ ಆದ ನಂತರ, ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದರು. ನಂತರ ಮುಸ್ಲಿಂ ಯುವಕರು ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ನಂತರ, ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಘರ್ಷಣೆಯಲ್ಲಿ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಹಲ್ಯಾ ನಗರದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆ ತಡೆದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಕ್ಕಾಗಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ದಿ ಹಿಂದೂ ವರದಿ ಹೇಳುತ್ತದೆ. ಈ ವರದಿಯಲ್ಲಿ ಅಹಲ್ಯಾ ನಗರ ಸೂಪರಿಂಟೆಂಡೆಂಟ್ ಸೋಮನಾಥ್ ಖರ್ಗೆ ಅವರ ಪ್ರತಿಕ್ರಿಯೆಯೂ ಸೇರಿದೆ. ಆದರೆ ಯಾವುದೇ ಮಾಧ್ಯಮ ವರದಿಗಳಲ್ಲಿ ನವರಾತ್ರಿ ಆಚರಣೆಯ ಸಮಯದಲ್ಲಿ ಮಾಂಸವನ್ನು ಎಸೆಯಲಾಗಿದೆ ಅಥವಾ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ.

ಮಹಾರಾಷ್ಟ್ರ ಟೈಮ್ಸ್ ಹಾಗೂ ಹಿಂದಿ ಏಷ್ಯಾನೆಟ್ ಸೆಪ್ಟೆಂಬರ್ 29 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದನ್ನು ಕಾಣಬಹುದು. ‘‘ಅಹಲ್ಯಾನಗರ ನಗರದಲ್ಲಿ ದುರ್ಗಾ ಮಾತಾ ದೌದ್ ಆಚರಣೆಯ ಸಂದರ್ಭ ಬಿಡಿಸಿದ ಆಕ್ಷೇಪಾರ್ಹ ರಂಗೋಲಿಯಲ್ಲಿ "ಐ ಲವ್ ಮೊಹಮ್ಮದ್" ಎಂಬ ಪದಗಳು ಕಂಡುಬಂದ ನಂತರ ವಿವಾದ ಭುಗಿಲೆದ್ದಿದೆ. ಪೊಲೀಸರು ಸಂಬಂಧಪಟ್ಟ ವ್ಯಕ್ತಿಯನ್ನು ಬಂಧಿಸಿದ್ದರೂ, ಮುಸ್ಲಿಂ ಸಮುದಾಯವು ಆಕ್ರೋಶ ವ್ಯಕ್ತಪಡಿಸಿದೆ. ಪರಿಣಾಮವಾಗಿ, ಛತ್ರಪತಿ ಸಂಭಾಜಿ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಲಾಯಿತು. ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಬಳಿಕ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.

ನ್ಯೂಸ್ ನೇಷನ್ ಕೂಡ ಸೆಪ್ಟೆಂಬರ್ 29 ರಂದು ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಕೊಲೇಜ್ ಮೂಲಕ ಇದೇ ವೈರಲ್ ವೀಡಿಯೊವನ್ನು ಮತ್ತೊಂದು ಆ್ಯಂಗಲ್​ನಿಂದ ಹಂಚಿಕೊಂಡಿದೆ. ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ಐ ಲವ್ ಮೊಹಮ್ಮದ್ ರಂಗೋಲಿ ವಿಚಾರ ಗಲಾಟೆ ನಡೆದಿದೆ: 30 ಜನರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಇದರಲ್ಲಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ವೀಡಿಯೊ ನವರಾತ್ರಿ ಆಚರಣೆಯಲ್ಲಿ ಮಾಂಸ ಎಸೆದ ಮುಸ್ಲಿಮರ ವಿರುದ್ಧ ಲಾಠಿ ಚಾರ್ಜ್ ಅಲ್ಲ, ಬದಲಾಗಿ ಮಹಾರಾಷ್ಟ್ರದ ಅಹಲ್ಯಾ ನಗರದಲ್ಲಿ ನಡೆದ ಐ ಲವ್ ಮುಹಮ್ಮದ್ ವಿವಾದಕ್ಕೆ ಸಂಬಂಧಿಸಿದ  ಪ್ರತಿಭಟನೆಯಾದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Joe Biden serves Thanksgiving dinner while being treated for cancer? Here is the truth

Fact Check: അസദുദ്ദീന്‍ ഉവൈസി ഹനുമാന്‍ വിഗ്രഹത്തിന് മുന്നില്‍ പൂജ നടത്തിയോ? വീഡിയോയുടെ സത്യമറിയാം

Fact Check: சென்னை சாலைகளில் வெள்ளம் என்று வைரலாகும் புகைப்படம்?உண்மை அறிக

Fact Check: ಪಾಕಿಸ್ತಾನ ಸಂಸತ್ತಿಗೆ ಕತ್ತೆ ಪ್ರವೇಶಿಸಿದೆಯೇ? ಇಲ್ಲ, ಈ ವೀಡಿಯೊ ಎಐಯಿಂದ ರಚಿತವಾಗಿದೆ

Fact Check: శ్రీలంక వరదల్లో ఏనుగు కుక్కని కాపాడుతున్న నిజమైన దృశ్యాలా? కాదు, ఇది AI-జనరేటెడ్ వీడియో