Kannada

Fact Check: ಪ್ರಯಾಗ್‌ರಾಜ್‌ನಲ್ಲಿ ಗಲಭೆ ನಡೆಸಿದವರ ವಿರುದ್ಧ ಯುಪಿ ಪೊಲೀಸರು ಕ್ರಮ? ಇಲ್ಲಿ, ಇದು ರಾಜಸ್ಥಾನದ ವೀಡಿಯೊ

2025 ರ ಜೂನ್ 19 ರಂದು ಪ್ರಯಾಗ್‌ರಾಜ್ ಗಲಭೆಯ ಸಮಯದಲ್ಲಿ ಗಲಭೆ ನಡೆಸಿದ ಚಂದ್ರಶೇಖರ್ ಆಜಾದ್ ಅವರ ಬೆಂಬಲಿಗರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Vinay Bhat

ಜೂನ್ 29 ರಂದು, ಭೀಮ್ ಆರ್ಮಿ ಮುಖ್ಯಸ್ಥ ಮತ್ತು ನಗೀನಾದ ಸಂಸದ ಚಂದ್ರಶೇಖರ್ ಆಜಾದ್ ರಾವಣ ಅವರನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಲಾಯಿತು. ಅಜಾದ್ ಅವರ ಬಂಧನವು ಪ್ರಯಾಗ್‌ರಾಜ್‌ನ ಕರ್ಚಾನಾ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು. ಇದರಲ್ಲಿ ಅವರ ಬೆಂಬಲಿಗರು ಸೇರಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಘರ್ಷಣೆಗೆ ಪ್ರಚೋದನೆ ನೀಡಿದ ಹಲವಾರು ಆರೋಪಿಗಳು ಸೇರಿದಂತೆ 85 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂದರ್ಭದಲ್ಲಿ, 2025 ರ ಜೂನ್ 19 ರಂದು ಪ್ರಯಾಗ್‌ರಾಜ್ ಗಲಭೆಯ ಸಮಯದಲ್ಲಿ ಗಲಭೆ ನಡೆಸಿದ ಚಂದ್ರಶೇಖರ್ ಆಜಾದ್ ಅವರ ಬೆಂಬಲಿಗರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಪೊಲೀಸರು ಕೆಲವು ಗಾಯಗೊಂಡ ಯುವಕರನ್ನು ಎಲ್ಲೋ ಕರೆದೊಯ್ಯುತ್ತಿರುವುದನ್ನು ಕಾಣಬಹುದು. ಈ ಯುವಕರ ಕೈ ಮತ್ತು ತಲೆಗೆ ಬ್ಯಾಂಡೇಜ್ ಕಟ್ಟಲಾಗಿದೆ. ನಾಲ್ವರೂ ಸರಿಯಾಗಿ ನಡೆಯಲು ಸಹ ಸಾಧ್ಯವಾಗುತ್ತಿಲ್ಲ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪ್ರಯಾಗ್‌ರಾಜ್‌ನಲ್ಲಿ ಗಲಭೆ ನಡೆಸಿದ ಚಂದ್ರಶೇಖರ ರಾವಣ ಬೆಂಬಲಿಗರ ವಿರುದ್ಧ ಯುಪಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಜೂನ್‌ನಲ್ಲಿ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಸುಲಿಗೆ ಮಾಡುವ ಗ್ಯಾಂಗ್‌ನ ಅಪರಾಧಿಗಳನ್ನು ಬಂಧಿಸಿರುವುದನ್ನು ವೀಡಿಯೊ ತೋರಿಸುತ್ತದೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್ ಲೆನ್ಸ್ ಬಳಸಿ ವೀಡಿಯೊವನ್ನು ಹುಡುಕಿದಾಗ, ಜೂನ್ 5 ರಂದು ಹಲವು ಪೋಸ್ಟ್‌ಗಳಲ್ಲಿ ಇದು ಕಂಡುಬಂದಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ ಈ ಘಟನೆ ಶ್ರೀ ಗಂಗಾನಗರದ್ದು ಎಂದು ಹೇಳಲಾಗಿದೆ. ಪೊಲೀಸರು ಶ್ರೀ ಗಂಗಾನಗರದಲ್ಲಿ ನಾಲ್ವರು ಸುಲಿಗೆಕೋರರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ ಎಂದು ಸಹ ಬರೆಯಲಾಗಿದೆ. ಈ ದುಷ್ಕರ್ಮಿಗಳು ದರೋಡೆಕೋರರ ಹೆಸರಿನಲ್ಲಿ ಉದ್ಯಮಿಯಿಂದ ಸುಲಿಗೆಗೆ ಬೇಡಿಕೆ ಇಡುತ್ತಿದ್ದರು.

ಇದೇವೇಳೆ ಈ ಘಟನೆಯ ಕುರಿತು Patrika.com ನ ಶ್ರೀ ಗಂಗಾನಗರ ನಗರ ಆವೃತ್ತಿಯಲ್ಲಿ ಜೂನ್ 5, 2025 ರಂದು ಪ್ರಕಟಿಸಲಾದ ಸುದ್ದಿ ವರದಿಯನ್ನು ನಾವು ಕಂಡುಕೊಂಡೆವು. ಜೊತೆಗೆ ನ್ಯೂಸ್ 18 ರಾಜಸ್ಥಾನದ ವರದಿ ಕೂಡ ಸಿಕ್ಕಿತು. ಈ ಸುದ್ದಿಗಳಲ್ಲಿ, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಆರೋಪಿಗಳನ್ನು ಕಾಣಬಹುದು.

ವರದಿಯ ಪ್ರಕಾರ, ‘‘ಶ್ರೀ ಗಂಗಾನಗರ ಜಿಲ್ಲಾ ಪೊಲೀಸರು ದರೋಡೆಕೋರರಂತೆ ನಟಿಸಿ ಉದ್ಯಮಿಯಿಂದ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳಿಂದ 5 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಬಲೆ ಬೀಸಿ ಉದ್ಯಮಿಯ ಲೆಕ್ಕಪರಿಶೋಧಕ ಮತ್ತು ಸೋದರಳಿಯ ಸೇರಿದಂತೆ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದರು. ಆರೋಪಿಗಳು ಐಷಾರಾಮಿ ಕಾರಿನಲ್ಲಿ ಬಂದು ಹಣವನ್ನು ಸಂಗ್ರಹಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಅಂತರರಾಷ್ಟ್ರೀಯ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಲೆಕ್ಕಪರಿಶೋಧಕ ಈ ಯೋಜನೆಯನ್ನು ರೂಪಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗೌರವ್ ಯಾದವ್ ನೇತೃತ್ವದ ಕಾರ್ಯಾಚರಣೆಯಲ್ಲಿ ಸುಲಿಗೆ ಮಾಡಿದ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ’’ ಎಂಬ ಮಾಹಿತಿ ಇದರಲ್ಲಿದೆ.

ಗಂಗಾನಗರ ಪೊಲೀಸರು ಕೂಡ ತಮ್ಮ ಎಕ್ಸ್ ಹ್ಯಾಂಡಲ್‌ನಿಂದ ಈ ವಿಷಯದ ಬಗ್ಗೆ ಪ್ರಕಟವಾದ ಸುದ್ದಿಯನ್ನು ಸಹ ಹಂಚಿಕೊಂಡಿದ್ದರು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಕ್ರಿಮಿನಲ್ ಗ್ಯಾಂಗ್‌ನ ಬಂಧನವನ್ನು ತೋರಿಸುವ ರಾಜಸ್ಥಾನದ ವೀಡಿಯೊವನ್ನು ನಗೀನಾ ಸಂಸದ ಚಂದ್ರಶೇಖರ್ ಮತ್ತು ಅವರ ಬೆಂಬಲಿಗರಿಗೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Hindus vandalise Mother Mary statue during Christmas? No, here are the facts

Fact Check: തിരുവനന്തപുരത്ത് 50 കോടിയുടെ ഫയല്‍ ഒപ്പുവെച്ച് വി.വി. രാജേഷ്? പ്രചാരണത്തിന്റെ സത്യമറിയാം

Fact Check: நாம் தமிழர் கட்சியினர் நடத்திய போராட்டத்தினால் அரசு போக்குவரத்து கழகம் என்ற பெயர் தமிழ்நாடு அரசு போக்குவரத்து கழகம் என்று மாற்றப்பட்டுள்ளதா? உண்மை அறிக

Fact Check: ಇಸ್ರೇಲಿ ಪ್ರಧಾನಿ ನೆತನ್ಯಾಹು ಮುಂದೆ ಅರಬ್ ಬಿಲಿಯನೇರ್ ತೈಲ ದೊರೆಗಳ ಸ್ಥಿತಿ ಎಂದು ಕೋವಿಡ್ ಸಮಯದ ವೀಡಿಯೊ ವೈರಲ್

Fact Check: జగపతి బాబుతో జయసుధ కుమారుడు? కాదు, అతడు WWE రెజ్లర్ జెయింట్ జంజీర్